ಕಸ ವಿಂಗಡಣೆ ಆಗದಿದ್ದರೆ ಸಿಎಂಗೂ ದಂಡ ಹಾಕ್ತೀವಿ- ಮೇಯರ್ ಗಂಗಾಂಬಿಕೆ

ಬೆಂಗಳೂರು: ಕಸ ವಿಂಗಡಣೆ ಮಾಡಿ ಕಸದ ವಾಹನಕ್ಕೆ ಹಾಕದಿದ್ದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ದಂಡ ಹಾಕುತ್ತೇವೆ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹೇಳಿದ್ದಾರೆ.

ಜನಪ್ರತಿನಿಧಿಗಳ ಮನೆಯ ಕೆಲಸಗಾರರು ಕಸವಿಂಗಡಣೆ ಮಾಡದೆ ವಾಹನಕ್ಕೆ ಹಾಗೂ ಕಸದ ತೊಟ್ಟಿಗೆ ಹಾಕುವ ಕುರಿತು ಪಬ್ಲಿಕ್ ಟಿವಿ ಇಂದು ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ರಾಜಕೀಯ ನಾಯಕರಿಗೆ ಹಾಗೂ ಸಚಿವರಿಗೆ ಖಡಕ್ ಸಂದೇಶ ನೀಡಿದೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮೇಯರ್ ಗಂಗಾಬಿಕೆ, ಜನಪ್ರತಿನಿಧಿಗಳು ತಮ್ಮ ಮನೆಯ ಕೆಲಸಗಾರರಿಗೆ ಕಸವಿಂಗಡಣೆ ಮಾಡುವಂತೆ ತಿಳಿಹೇಳಬೇಕು. ಕೆಸಗಾರರಿಗೆ ಗೊತ್ತಾಗದೆ ತಪ್ಪು ನಡೆಯುತ್ತಿದ್ದರೆ ತಕ್ಷಣವೇ ರಾಜಕೀಯ ನಾಯಕರು, ಸಚಿವರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲರಂತೆ ಅವರಿಗೂ ದಂಡ ಹಾಕಲಾಗುತ್ತದೆ ಎಂದು ಹೇಳಿದ್ದಾರೆ.

ಮನೆಗಳಿಗೆ ಬಂದು ಕಸ ಪಡೆಯುವ ಹಾಗೂ ನಗರವನ್ನು ಸ್ವಚ್ಛವಾಗಿರಿಸುವ ಪೌರಕಾರ್ಮಿಕರಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ನಮ್ಮ ಅನೇಕ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡಿಕೊಡುವಂತೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸಿಲಿಕಾನ್ ಸಿಟಿ ಕಸದ ನಗರಿ ಅಂತ ಈಗಾಗಲೇ ಜಗಜ್ಜಾಹೀರಾಗಿದೆ. ಬಿಬಿಸಿಯೇ ಬೆಂಗಳೂರು ನಗರವನ್ನು ಕೊಳಕು ನಗರ ಅಂತಲೂ ಘೋಷಿಸಿ ಬಿಟ್ಟಿದೆ. ಈ ಹಣೆಪಟ್ಟಿಯಿಂದ ಹೊರ ಬರೋದಕ್ಕೆ ಜಾಹೀರಾತಿಗಾಗಿ ಬಿಬಿಎಂಪಿ ಕೋಟಿಗಟ್ಟಲೇ ಹಣ ಕೂಡ ಖರ್ಚು ಮಾಡುತ್ತಿದೆ. ಹಸಿ ಕಸ, ಒಣ ಕಸ ಅಂತ ವಿಂಗಡಣೆ ಮಾಡದಿದ್ರೆ, ನಿಮ್ಮ ಮನೆ ಕಸ ಸ್ವೀಕರಿಸಲ್ಲ ಅಂತ ಬಿಬಿಎಂಪಿ ಫರ್ಮಾನು ಕೂಡ ಹೊರಡಿಸಿದೆ. ಬೆಳಗ್ಗೆ ಹೊತ್ತು ಮನೆ ಮುಂದೆ ಬರೋ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡದಿದ್ದರೆ ನಾವು ಸ್ವೀಕರಿಸಲ್ಲ ಅಂತ ಬಿಸಾಡಿ ಹೊರಡುತ್ತಾರೆ. ಆದ್ರೆ, ಇದೀಗ ಈ ರೂಲ್ಸ್ ಗಳನ್ನ ಜನಪ್ರತಿನಿಧಿಗಳು ಫಾಲೋ ಮಾಡುತ್ತಿಲ್ಲ ಎಂಬುದು ಪಬ್ಲಿಕ್ ಟಿವಿ ಬೆಳಗ್ಗೆ ಪರೀಕ್ಷೆ ನಡೆಸಲು ಹೊರಟಿತ್ತು. ರಾಜ್ಯದ ಅಧಿಪತಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಡಿಸಿಎಂ ಪರಮೇಶ್ವರ್, ಸಚಿವೆ ಜಯಮಾಲಾ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಬಳಿ ಸ್ಟಿಂಗ್ ಆಪರೇಷನ್ ಕೂಡ ನಡೆಸಿತ್ತು. ಈ ವೇಳೆ ಅಲ್ಲಿ ಕಂಡು ಬಂದ ದೃಶ್ಯ ನಿಜಕ್ಕೂ ಮುಜುಗರ ತರಿಸುವಂತಿತ್ತು.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *