ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಗೇಟ್‍ಪಾಸ್ ಶಿಕ್ಷೆ!

ಬೆಂಗಳೂರು: ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿದ್ದಕ್ಕೆ ಬಿಬಿಎಂಪಿ ತನ್ನ ಪೌರಕಾರ್ಮಿಕರಿಗೆ ಗೇಟ್ ಪಾಸ್ ನೀಡಿದೆ.

ವೇತಕ ಹೆಚ್ಚಳಕ್ಕಾಗಿ ಆಗ್ರಹಿಸಿದ್ದ ಪೌರಕಾರ್ಮಿಕರಿಗೆ ಬಿಬಿಎಂಪಿ ಗೇಟ್‍ಪಾಸ್ ಶಿಕ್ಷೆ ನೀಡಿದೆ. ತನ್ನ ಎಂಟೂ ವಲಯಗಳಲ್ಲೂ ಪೌರ ಕಾರ್ಮಿಕರಿಗೆ ಗೇಟ್‍ಪಾಸ್ ಶಿಕ್ಷೆ ನೀಡಿದ್ದು, ಈಗಾಗಲೇ 1,700 ಮಂದಿಗೆ ಕೆಲಸಕ್ಕೆ ಬರಬೇಡಿ ಎಂದು ಸೂಚಿಸಿದೆ.

ಕಂಟ್ರಾಕ್ಟರ್ ಪದ್ದತಿ ಇದ್ದಾಗ ಪಿಎಫ್, ಇಎಸ್‍ಐ ಕಟ್ಟದೆ ಇರುವವರನ್ನ ಟಾರ್ಗೆಟ್ ಮಾಡಿರುವ ಪಾಲಿಕೆಯು ಪಿಎಫ್, ಇಎಸ್‍ಐ ಕಟ್ಟದೇ ಇರುವ ಪೌರಕಾರ್ಮಿಕರನ್ನ `ಒಂದು ವರ್ಷದೊಳಗಿನ ಪೌರ ಕಾರ್ಮಿಕರು’ ಅಂತ ಗುರುತಿಸಿ ಗೇಟ್‍ಪಾಸ್ ನೀಡುತ್ತಿದ್ದಾರೆ. ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳ ನಡುವಿನ ಕಮಿಷನ್ ಒಪ್ಪಂದಕ್ಕೆ ಪೌರ ಕಾರ್ಮಿಕರು ಬಲಿಯಾಗಿದ್ದು, ಬಿಬಿಎಂಪಿ ನಿರ್ಧಾರಕ್ಕೆ ಪೌರಕಾರ್ಮಿಕರು ಕಂಗಾಲಾಗಿದ್ದಾರೆ.

ಸಂಬಳ ಆಗಿಲ್ಲ ಅಂತ ಪೌರಕಾರ್ಮಿಕ ಮಹಿಳೆಯರು ತಮ್ಮ ಚಿನ್ನದ ಕಿವಿಯೋಲೆ, ಆಭರಣಗಳನ್ನ ಅಡವಿಟ್ಟು ಜೀವನ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಒಮ್ಮೆಲೆ ಕೆಲಸಕ್ಕೆ ಬರಬೇಡಿ ಎಂಬ ತೀರ್ಮಾನದಿಂದ ಪೌರಕಾರ್ಮಿಕರು ಬೇಸತ್ತು ಹೋಗಿದ್ದಾರೆ. ಅಲ್ಲದೇ ವೇತನ ಸಿಕ್ಕಿಲ್ಲ ಅಂತ ಸಾಲ ಮಾಡಿದ್ದೇವೆ ಈಗ ಬದುಕು ನಡೆಸೋದು ಹೇಗೆ ಅಂತ ಕಣ್ಣೀರು ಸುರಿಸುತ್ತಿದ್ದು, ಬಿಬಿಎಂಪಿ ಏಕಾಏಕಿ ನಿರ್ಧಾರದಿಂದ ಮಕ್ಕಳ ಶಾಲಾ ಶಿಕ್ಷಣದ ಶುಲ್ಕ ಕಟ್ಟಲು ದುಡ್ಡಿಲ್ಲ ಹಾಗೂ ಮನೆ ಬಾಡಿಗೆ ಕಟ್ಟುವುದಕ್ಕೆ ಸಹ ದುಡ್ಡಿಲ್ಲ ಎಂದು ಪೌರಕಾರ್ಮಿಕರು ಗೋಳಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *