ಬಿಬಿಎಂಪಿಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ: ಹೆಚ್‍ಡಿಡಿ ಘೋಷಣೆ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಇನ್ನೂ 7-8 ತಿಂಗಳು ಬಾಕಿ ಇದೆ. ಈಗಾಗಲೇ ಜೆಡಿಎಸ್ ಪಕ್ಷ ಬಿಬಿಎಂಪಿ ಚುನಾವಣೆಯ ಅಖಾಡಕ್ಕೆ ಇಳಿದಿದೆ. ಬಿಬಿಎಂಪಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರೋ ಪಕ್ಷ, ಈ ನಿಟ್ಟಿನಲ್ಲಿ ಸಭೆಗಳನ್ನ ಮಾಡಿ ಚುನಾವಣೆಗೆ ಸಿದ್ಧತೆ ಆರಂಭ ಮಾಡಿದೆ.

ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದೆ. ನಿನ್ನೆ ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವತಃ ದೇವೇಗೌಡರೇ ಏಕಾಂಗಿ ಸ್ಪರ್ಧೆ ಅಂತ ಘೋಷಣೆ ಮಾಡಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. ಆದರೆ ಅಧಿಕಾರ ಮಾಡುವಷ್ಟು ಸೀಟುಗಳು ಬಂದಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಜೊತೆ ಉಪ ಮೇಯರ್ ಪಟ್ಟದೊಂದಿಗೆ 4 ವರ್ಷ ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ಹೇಗಾದರೂ ಮಾಡಿ ಬಿಬಿಎಂಪಿ ಚುಕ್ಕಾಣಿ ಹಿಡಿಯೋಕೆ ಜೆಡಿಎಸ್ ತೀರ್ಮಾನ ಮಾಡಿದ್ದು, ಚುನಾವಣೆ ಕೆಲಸಕ್ಕೆ ಚಾಲನೆ ನೀಡಿದೆ.

198 ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಹುಡುಕಾಟಕ್ಕೆ ದೇವೇಗೌಡರು ಚಾಲನೆ ನೀಡಿದ್ದಾರೆ. ಪಕ್ಷದಿಂದ ಗೆದ್ದು ಪಕ್ಷವನ್ನು ಬಿಟ್ಟಿರೋ ಸದಸ್ಯರಿಂದ ಪಾಠ ಕಲಿತಿರೋ ಜೆಡಿಎಸ್, ಈ ಬಾರಿ ಹಾಗೇ ಆಗದಂತೆ ಎಚ್ಚರವಹಿಸಿ ಟಿಕೆಟ್ ಹಂಚಿಕೆ ಮಾಡಲಿದೆ. ಬಿಬಿಎಂಪಿ ಗೆಲ್ಲೋದಕ್ಕೆ ಮತ್ತೊಂದು ಪ್ಲಾನ್ ಮಾಡಿರೋ ಜೆಡಿಎಸ್ ಶೇ.50ರಷ್ಟು ಮಹಿಳೆಯರಿಗೆ ಟಿಕೆಟ್ ಕೊಡೋಕು ನಿರ್ಧಾರ ಮಾಡಿದೆ. ಅಲ್ಲದೆ ಪ್ರತಿ ವಾರ್ಡ್ ನಲ್ಲೂ ಜೆಡಿಎಸ್ ಸದಸ್ಯತ್ವ ನೊಂದಣಿಗೆ ಚಾಲನೆ ನೀಡಿ ಕಾರ್ಯಕರ್ತರ ಪಡೆ ರಚನೆಗೆ ತಂತ್ರ ರೂಪಿಸಿದೆ. ದೇವೇಗೌಡರ ಈ ತಂತ್ರ ವರ್ಕ್ ಆಗುತ್ತಾ ಅಥವಾ ಬಿಬಿಎಂಪಿ ಗದ್ದುಗೆಗೆ ಏಕಾಂಗಿಯಾಗಿ ಜೆಡಿಎಸ್ ಏರುತ್ತಾ ಅನ್ನೋದನ್ನು ಸದ್ಯದ ಕುತೂಹಲವಾಗಿದೆ.

Comments

Leave a Reply

Your email address will not be published. Required fields are marked *