ಬಸವಸಾಗರ ಜಲಾಶಯ ಭರ್ತಿ – ನದಿ ಕಡೆ ತೆರಳದಂತೆ ಮುನ್ನೆಚ್ಚರಿಕೆ

ಯಾದಗಿರಿ: ತಿಂಗಳುಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಸವಸಾಗರ ಜಲಾಶಯ ಭರ್ತಿಯಾಗಿದ್ದು, ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ.

ಕೃಷ್ಣಾ ನದಿ ಒಡಲು ಈಗ ಉಕ್ಕಿ ಹರಿಯುತ್ತಿದ್ದು, ನೀಲಕಂಠರಾಯನಗಡ್ಡಿ ಗ್ರಾಮ ಈಗ ನಡುಗಡ್ಡೆಯಾಗಿದೆ. ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದ ಸಮೀಪವಿರುವ ಬಸವಸಾಗರ ಜಲಾಶಯ ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ಹೆಚ್ಚಿನ ಒಳಹರಿವು ಬಂದ ಹಿನ್ನೆಲೆಯಲ್ಲಿ ಇದೀಗ ಜಲಾಶಯ ಭರ್ತಿಯಾಗಿದೆ.

ಜಲಾಶಯದ 15 ಕ್ರಸ್ಟ್ ಗೇಟುಗಳ ಮೂಲಕ 1,60 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು, ನದಿ ಒಡಲು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಆದ್ದರಿಂದ ಪ್ರವಾಹ ಭೀತಿ ಎದುರಾಗುವ ಸಂಭವ ಹೆಚ್ಚಾಗಿದ್ದು, ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ. ನದಿ ತೀರದ ಗ್ರಾಮಸ್ಥರು ನದಿ ಕಡೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.

ಕಳೆದ ದಿನ ನದಿಗೆ ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು. ಪೂಜಮ್ಮ, ತುಂಬು ಗರ್ಭಿಣಿಯಾಗಿರುವುದರಿಂದ ಯಾವುದೇ ಸಮಯದಲ್ಲಿ ಹೆರಿಗೆ ಆಗುವ ಸಾಧ್ಯತೆ ಇತ್ತು. ಹಾಗಾಗಿ ಪೂಜಮ್ಮ ತಪಾಸಣೆಗೆಂದು ಆಸ್ಪತ್ರೆಗೆ ಹೋಗಲು ನರಳಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಕಕ್ಕೇರಾಕ್ಕೆ ತೆರಳದೆ ತತ್ತರಿಸಿ ಹೋಗಿದ್ದಾರೆ. ಅದೇ ರೀತಿ ಗ್ರಾಮದ ಸಂಪರ್ಕ ಕಡಿದುಕೊಂಡ ಕಾರಣ ಶಾಲಾ ಶಿಕ್ಷಕ ಬಸನಗೌಡ ಕೂಡ ಸೋಮವಾರದಿಂದ ಗ್ರಾಮದಲ್ಲೇ ತಂಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *