ಮೈಲೇಜ್‍ಗಾಗಿ ಸಿದ್ದರಾಮಯ್ಯ ಸರ್ಕಸ್

ಬೆಂಗಳೂರು: ಮೈಲೇಜ್‍ಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರು ಶಾಸಕ ಯತ್ನಾಳ್ ವಿರುದ್ಧ ಹೋರಾಟದ ಮಾಸ್ಟರ್ ಪ್ಲ್ಯಾನ್ ಮಾಡಿದರಾ ಅನ್ನೋ ಅನುಮಾನ ಕಾಂಗ್ರೆಸ್ ವಲಯದಲ್ಲೇ ಶುರುವಾಗಿದೆ. ಬಜೆಟ್ ಅಧಿವೇಶನದಲ್ಲಿ ಹೋರಾಟದ ಲೀಡ್‍ಗೆ ತಂತ್ರ ಮಾಡಿದ ಸಿದ್ದರಾಮಯ್ಯ, ದೊರೆಸ್ವಾಮಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿದರು ಅನ್ನೋದನ್ನೇ ಮುಂದಿಟ್ಟುಕೊಂಡು ಎರಡು ದಿನ ಕಲಾಪ ನಡೆಯದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಕಲಾಪವೇ ನಡೆಯದಂತೆ ತಡೆದ ಸಿದ್ದರಾಮಯ್ಯ ಬೇರೆಯದೇ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗುತ್ತಿದೆ. ಸಿಎಲ್ ಪಿ ಸಭೆ ಕರೆಯುವ ಮೂಲಕ ಶಾಸಕರ ಜೊತೆ ಸದನದ ಹೋರಾಟಕ್ಕೆ ಮತ್ತಷ್ಟು ಚುರುಕು ಮುಟ್ಟಿಸಿದರು. ಶಾಸಕರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಕೊಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ತಂತ್ರಕ್ಕೆ ಮೊರೆ ಹೋಗಿದ್ದರು.

ಈ ಮೂಲಕ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಅನ್ನೋ ಆರೋಪದಿಂದ ಮುಕ್ತರಾಗಲು ಸದನದಲ್ಲಿ ಯತ್ನಾಳ್ ಪ್ರಕರಣ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಯುದ್ಧ ಸಾರಿದ್ದಾರೆ. ಕಾಂಗ್ರೆಸ್ ಶಾಸಕರು ಹಾಗೂ ನಾಯಕರ ವಿಶ್ವಾಸ ಗಳಿಸಲು ಮುಂದಾದ ಸಿದ್ದರಾಮಯ್ಯ ಸದನದ ಹೋರಾಟದ ಮೂಲಕ ತಮ್ಮ ಮೈಲೇಜ್ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಅನ್ನೋ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿರುವುದಂತು ಹೌದು.

Comments

Leave a Reply

Your email address will not be published. Required fields are marked *