ಕೆಲವೇ ನಿಮಿಷದಲ್ಲಿ 5,55,55,555 ರೂ.ಗೆ ಒಡೆಯನಾದ ಪಿಯು ವಿದ್ಯಾರ್ಥಿ!

ಲಕ್ನೋ: ಬ್ಯಾಂಕ್ ಮಾಡಿದ ಚಿಕ್ಕ ತಪ್ಪಿನಿಂದಾಗಿ ಪಿಯುಸಿ ಓದುತ್ತಿರುವ ಯುವಕ ಕೆಲವೇ ಕ್ಷಣದಲ್ಲಿ ಕೋಟ್ಯಾಧಿಪತಿ ಆದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

ಕೇಶವ್ ಶರ್ಮಾ ಪಿಯುಸಿ ಓದುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಎಸಗಿದ ಚಿಕ್ಕ ತಪ್ಪಿನಿಂದಾಗಿ ಈತನ ಖಾತೆಯಲ್ಲಿ 5 ಕೋಟಿ ರೂ. ಗೂ ಹೆಚ್ಚು ಹಣ ಟ್ರಾನ್ಸ್ ಫರ್ ಆಗಿದೆ. ಟ್ರಾನ್ಸ್ ಫರ್ ಆದ ಬಳಿಕ ಬ್ಯಾಂಕ್ ಕಡೆಯಿಂದ ಕೇಶವ್ ಮೊಬೈಲಿಗೆ ಮೆಸೇಜ್ ಬಂದಿದೆ.

ವರದಿಗಳ ಪ್ರಕಾರ ಬಾರಾಬಂಕಿನಲ್ಲಿರುವ ಅವಾಸ್ ವಿಕಾಸ್ ಕಲೋನಿಯ ನಿವಾಸಿ ಕೇಶವ್ ಶರ್ಮಾ ಅವರ ಎಸ್‍ಬಿಐ ಸೇವಿಂಗ್ಸ್ ಅಕೌಂಟ್‍ನಲ್ಲಿ ಹಣ ಜಮೆಯಾಗಿತ್ತು. ಮಾರ್ಚ್ 16ರಂದು ಕೇಶವ್ ಅವರ ತಂದೆಯ ಫೋನಿನಲ್ಲಿ ಬ್ಯಾಂಕ್ ಕಡೆಯವರಿಂದ ಮೆಸೇಜ್ ಬಂದಿದೆ. ಮೆಸೇಜ್ ನೋಡಿದ್ದಾಗ ತನ್ನ ಮಗ ಕೇಶವ್ ಖಾತೆಯಲ್ಲಿ 5,55,55,555 ರೂ. ಜಮೆ ಆಗಿತ್ತು.

ಕೇಶವ್ ಮೊದಲು ಆ ಮೆಸೇಜ್ ನೋಡಿ ನಾನು ಕೋಟ್ಯಾಧಿಪತಿ ಹೇಗೆ ಆದೆ ಎಂಬುದು ಆತನಿಗೆ ನಂಬಲಿಕ್ಕೆ ಆಗಲಿಲ್ಲ. ಈ ಮೆಸೇಜ್ ನೋಡಿದ ಕೇಶವ್ ತಂದೆ ಕೂಡ ದಂಗಾಗಿದ್ದಾರೆ. ಆದರೆ ಇದರ ಬಗ್ಗೆ ಬ್ಯಾಂಕಿನವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ದೊಡ್ಡ ಮೊತ್ತ ಅಕೌಂಟ್‍ನಲ್ಲಿ ಜಮೆ ಆಗಿ ಕೆಲವೇ ನಿಮಿಷಗಳಲ್ಲಿ ಬ್ಯಾಂಕಿನವರಿಗೆ ಅವರ ತಪ್ಪು ಗೊತ್ತಾಗಿದೆ. ಜಮೆ ಆಗಿದ್ದ ಹಣದ ಜೊತೆ ಕೇಶವ್ ಖಾತೆಯಲ್ಲಿ ಮೊದಲು ಇದ್ದ ಹಣ ಕೂಡ ತೆಗೆದಿದ್ದಾರೆ ಎಂದು ವರದಿಯಾಗಿದೆ.

ಕೇಶವ್ ತಂದೆ ಅವರ ಪ್ರಕಾರ ಖಾತೆಯಲ್ಲಿ ಮೊದಲೇ 1,50,000 ರೂ. ಇತ್ತು. ಆದರೆ ಈಗ ಕೋಟಿ ರೂ. ಜೊತೆ ಈ ಹಣವನ್ನು ತೆಗೆದ ಕಾರಣ ಕೇಶವ್ ಅವರ ತಂದೆ ಅಸಮಾಧಾನಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *