ಮಗನಿಗೆ ಗೆಳೆಯನ ನೆರವು ಪ್ರೇರಣೆ- ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣ ನೀಡ್ತಿದ್ದಾರೆ ಮಾಜಿ ಸೈನಿಕ

ಬೀದರ್: ಮಗನನ್ನು ಸ್ನೇಹಿತ ಓದಿಸಿದ ಎನ್ನುವ ಕಾರಣಕ್ಕೆ ಇಂದು ಬೀದರಿನ ಮಾಜಿ ಸೈನಿಕರೊಬ್ಬರು ನೂರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಕುಗ್ರಾಮದ ಬಡ ಮಕ್ಕಳಿಗೆ ಹೈಟೆಕ್ ಶಾಲೆಯನ್ನು ಕಟ್ಟಿಸಿ ಪೋಷಕರು ಕೊಟ್ಟಷ್ಟು ಫೀ ತೆಗೆದುಕೊಂಡು, 300ಕ್ಕೂ ಹೆಚ್ಚು ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಬೀದರಿನ ಸಂತಾಪುರದ ಶಿಕ್ಷಣ ಸಂತ, ಮಾಜಿ ಸೈನಿಕ ಬಾಪೂರಾವ್ ಪಬ್ಲಿಕ್ ಹೀರೋ ಆಗಿದ್ದಾರೆ.

ಬಾಪೂರಾವ್ ಪಾಟೀಲ್ ಅವರ ಊರು ಬೀದರ್ ಜಿಲ್ಲೆ ಔರಾದ್ ತಾಲೂಕಿನ ಸಂತಾಪುರ. 20 ವರ್ಷ ಗಡಿಯಲ್ಲಿ ದೇಶ ಕಾದಿರುವ ಬಾಪೂರಾವ್ ಕಳೆದ 9 ವರ್ಷಗಳಿಂದ ನೂರಾರು ಮಕ್ಕಳಿಗೆ ಶಿಕ್ಷಣ ನೀಡೋ ಮೂಲಕ ದಾರಿದೀಪವಾಗಿದ್ದಾರೆ.

ಅಂದ ಹಾಗೇ ಶಾಲೆ ಹೆಸರು ಮಾಜಿ ಸೈನಿಕ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ಓದೋ ಮಕ್ಕಳಿಗೆ ಶುಲ್ಕ ಇಲ್ಲ. ಕೇಳಲ್ಲ. ಆದರೆ ಪೋಷಕರು ಅಷ್ಟೋ ಇಷ್ಟೋ ಕೊಟ್ರೆ ಮಾತ್ರ ತೆಗೆದುಕೊಳ್ಳುತ್ತಾರೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಹೈಟೆಕ್ ಶಿಕ್ಷಣ ನೀಡುತ್ತಿದ್ದಾರೆ.

ಶಿಕ್ಷಣ ದಾಸೋಹಕ್ಕೆ ಗೆಳೆಯ ಸ್ಫೂರ್ತಿ. ಬಾಪೂರಾವ್ ಪುತ್ರನನ್ನ ಎಲ್‍ಕೆಜಿಯಿಂದ ಪಿಜಿವರೆಗೆ ಉಚಿತವಾಗಿ ಓದಿಸಿದ್ರು. ಇದನ್ನು ಪ್ರೇರಣೆಯಾಗಿ ತೆಗೆದುಕೊಂಡ ಬಾಪೂರಾವ್ ಈ ಶಾಲೆ ಸ್ಥಾಪಿಸಿದ್ದಾರೆ. ಸದ್ಯ ಎಲ್‍ಕೆಜಿಯಿಂದ 8ನೇ ತರಗತಿವರೆಗೆ 300 ಮಕ್ಕಳು ಓದುತ್ತಿದ್ದಾರೆ ಎಂದು ಬಾಪೂರಾವ್ ತಿಳಿಸಿದ್ದಾರೆ.

ಈ ಮಾಜಿ ಸೈನಿಕ 2 ಎಕರೆ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ಡ್ರಿಪ್ ಇರಿಗೇಷನ್ ಮೂಲಕ 500 ಮಾವು, 500 ನಿಂಬೆ, 200 ದಾಳಿಂಬೆ, ಬಾಳೆ ಗಿಡಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಈ ಕೃಷಿಯಿಂದ ಬರುವ ಆದಾಯವನ್ನು ಶಾಲೆಗೆ ಬಳಸುತ್ತಿದ್ದಾರೆ. ಬಾಪೂರಾವ್ ಶಿಕ್ಷಣ ದಾಸೋಹದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *