1 ವರ್ಷ ಕಳೆದ್ರೂ ಸಾಲಮನ್ನಾನೇ ಇಲ್ಲ- ಅನ್ನದಾತರಿಗೆ ನೋಟಿಸ್ ಮೇಲೆ ನೋಟಿಸ್

– ಇಂದು ರೈತರು ಕೋರ್ಟ್ ಗೆ ಹಾಜರ್

ಚಾಮರಾಜನಗರ: ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿ ಒಂದು ವರ್ಷವಾಗುತ್ತಾ ಬಂದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ಪತ್ರ ಬರೆದು ನಿಮ್ಮ ಜೊತೆ ನಾವಿದ್ದೇವೆ, ಹೆದರಬೇಡಿ ಎಂದು ಧೈರ್ಯವನ್ನೂ ಕೂಡ ತುಂಬಿದ್ದಾರೆ. ಆದರೆ ಕೋರ್ಟ್ ನೋಟಿಸ್ ಬರೋದು ಮಾತ್ರ ನಿಂತಿಲ್ಲ.

ಇತ್ತೀಚೆಗಷ್ಟೇ ಹಾವೇರಿ ಅನ್ನದಾತರಿಗೆ ಕೋರ್ಟ್ ಶಾಕ್ ಕೊಟ್ಟಿತ್ತು. ಇದೀಗ ಚಾಮರಾಜನಗರದ ಸರದಿ. ಇಲ್ಲಿ ಮಳೆ ಕೊರತೆಯಿಂದ ರೈತರು ಕೃಷಿಗಾಗಿ ಮಾಡಿದ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಜಿಲ್ಲೆಯ ವೆಂಕಟಯ್ಯನಛತ್ರದ ವಿಜಯ ಬ್ಯಾಂಕ್‍ನಲ್ಲಿ 20ಕ್ಕೂ ಹೆಚ್ಚು ರೈತರು ಬೆಳೆ ಸಾಲ ಪಡೆದಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗದೆ ಸುಸ್ಥಿದಾರರಾಗಿದ್ದಾರೆ. ಹಾಗಾಗಿ ವಿಜಯ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿದ್ದು ಜಿಲ್ಲಾ ನ್ಯಾಯಾಲಯ ಇಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ ಎಂದು ರೈತ ವೀರತಪ್ಪ ಹೇಳಿದ್ದಾರೆ.

ಸಾಲಮನ್ನಾ ಮಾಡುತ್ತೇನೆಂಬ ಸಿಎಂ ಕುಮಾರಸ್ವಾಮಿಯವರ ಭರವಸೆ, ಭರವಸೆಯಾಗಿಯೇ ಉಳಿದಿದೆ. ಇದರ ನಡುವೆ ಪತ್ರ ಬರೆದು ಧೈರ್ಯ ಬೇರೆ ತುಂಬಿದರು. ಆದರೆ ಅನ್ನದಾತರಿಗೆ ಮಾತ್ರ ಶಾಕ್ ಮೇಲೆ ಶಾಕ್ ಬಂದೆರಗುತ್ತಿದೆ. ಬ್ಯಾಂಕ್‍ಗೆ ಹೋಗಿ ಸಾಲಮನ್ನಾ ಯೋಜನೆ ಬಗ್ಗೆ ಮಾತನಾಡಿದರೆ, ಕುಮಾರಸ್ವಾಮಿ ಮುಖ ನೋಡಿ ನಿಮಗೆ ಸಾಲ ನೀಡಿಲ್ಲ. ನಿಮ್ಮ ಜಮೀನಿನ ಮೇಲೆ ಸಾಲ ನೀಡಿದ್ದೇವೆ. ಸಾಲ ಮರುಪಾವತಿಸಿ ಇಲ್ಲವೆ ಕಾನೂನು ಕ್ರಮ ಎದುರಿಸಿ ಎನ್ನುತ್ತಿದ್ದಾರೆ ಎಂದು ರೈತ ನಂದೀಶ್ ಆರೋಪಿಸಿದ್ದಾರೆ.

ಬಿಜೆಪಿ, ಮೋದಿ ಹೇಳಿದಂತೆ ಕುಮಾರಸ್ವಾಮಿ ನೀಡಿದ್ದ ಸಾಲಮನ್ನಾ ಭರವಸೆ ರೈತರ ಪಾಲಿಗೆ ಹುಸಿಯಾಗಿದೆ. ತಮ್ಮ ಸಾಲ ಮನ್ನಾ ಎಂದು ಯೋಚಿಸುತ್ತಿದ್ದವರಿಗೆ ದಿಕ್ಕೇ ತೋಚದಂತಾಗಿದೆ.

Comments

Leave a Reply

Your email address will not be published. Required fields are marked *