ಕರ್ನಾಟಕಕ್ಕೂ ಎನ್ಆರ್ ಸಿ ವಿಸ್ತರಿಸಿ: ಕಲಾಪದಲ್ಲಿ ತೇಜಸ್ವಿ ಸೂರ್ಯ ಗುಡುಗು

ನವದೆಹಲಿ: ಕರ್ನಾಟಕಕ್ಕೂ ನ್ಯಾಷನಲ್ ರಿಜಿಸ್ಟ್ರೇಷನ್ ಆಫ್ ಸಿಟಿಜನ್(ಎನ್ಆರ್ ಸಿ) ವಿಸ್ತರಿಸುವಂತೆ ಸಂಸತ್‍ನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ, ಕರ್ನಾಟಕದಲ್ಲೂ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಿದ್ದು, ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ವಿಸ್ತರಿಸಿದ್ದಾರೆ. ದಕ್ಷಿಣ ರಾಜ್ಯಗಳಲ್ಲೂ ಅಕ್ರಮ ಬಾಂಗ್ಲಾ ವಲಸಿಗರು ನುಸುಳಿದ್ದು, ಕರ್ನಾಟಕದಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಿವರಿಸಿದರು.

40 ಸಾವಿರಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯದಲ್ಲಿದ್ದಾರೆ ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ, ಅಕ್ರಮ ವಲಸಿಗರು ಸ್ಥಳೀಯ ಸಂಸ್ಥೆಗಳ ಸಹಾಯದಿಂದ ಆಧಾರ್ ಕಾರ್ಡ್ ಹಾಗೂ ಮತದಾರರ ಚೀಟಿಯನ್ನು ಪಡೆದಿದ್ದಾರೆ. ಟೆರರ್ ಮಾಡ್ಯೂಲ್ ಬಾಂಗ್ಲಾದಿಂದ ನಿರ್ವಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ದೇಶದ ವಿವಿಧೆಡೆ ಸ್ಫೋಟಗಳಿಗೆ ಬಾಂಗ್ಲಾ ವಲಸಿಗರೇ ಕಾರಣ ಎನ್ನಲಾಗುತ್ತಿದೆ.

ಕರಾವಳಿ ಹಾಗೂ ಚಿಕ್ಕಮಗಳೂರು ಭಾಗದಲ್ಲೂ ಸಹ ಬಾಂಗ್ಲಾ ವಲಸಿಗರು ಹೆಚ್ಚಿದ್ದು, ಹೀಗಾಗಿ ಇಡೀ ರಾಜ್ಯದ ಭದ್ರತೆಗೆ ಅಕ್ರಮ ಬಾಂಗ್ಲಾ ವಲಸಿಗರಿಂದ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಎನ್ಆರ್ ಸಿಯನ್ನು ಕರ್ನಾಟಕಕ್ಕೂ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ. ಇವರು ಭದ್ರತೆಗಷ್ಟೇ ಅಪಾಯಕಾರಿಯಲ್ಲ, ಸ್ಥಳೀಯರಿಂದ ಕೆಲಸ ಕಸಿದುಕೊಳ್ಳುವ ಮೂಲಕ ಆರ್ಥಿಕವಾಗಿಯೂ ಅಪಾಯಕಾರಿಯಗಿದ್ದಾರೆ ಎಂದು ತೇಜಸ್ವಿ ಸೂರ್ಯ ರಾಜ್ಯದಲ್ಲಿರುವ ಅಕ್ರಮ ವಲಸಿಗರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸಂಸತ್ ಗಮನ ಸೆಳೆದಿದ್ದಾರೆ.

Comments

Leave a Reply

Your email address will not be published. Required fields are marked *