ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‍ಗಳು ತೆರವು- ಬಿಬಿಎಂಪಿ ಅಧಿಕಾರಿ ಮಾತೃ ಇಲಾಖೆಗೆ ವಾಪಸ್

ಬೆಂಗಳೂರು: ನಗರದ ಬೆಳ್ಳಂದೂರು ವಾರ್ಡಿನಲ್ಲಿ ವಾಸವಾಗಿರುವ ಬಾಂಗ್ಲಾ ಅಕ್ರಮ ವಲಸಿಗರ ಶೆಡ್ ತೆರವು ಮಾಡಬೇಕಿದೆ. ಇದಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಮಾರತ್‍ಹಳ್ಳಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಟಿ.ಎಂ.ನಾರಾಯಣಸ್ವಾಮಿಯವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ತಕ್ಷಣವೇ ಜಾರಿಗೆ ಬರುವಂತೆ ಸೇವೆಯಿಂದ ಬಿಡುಗಡೆ ಮಾಡಿ ಆದೇಶ ನೀಡಲಾಗಿದೆ. ಮಾತೃ ಇಲಾಖೆಗೆ ಹಿಂದಿರುಗಿಸಲು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

ಖಾಸಗಿ ಪ್ರದೇಶದಲ್ಲಿ ನಿರ್ಮಿಸಿದ್ದ ಶೆಡ್ ತೆರವು ಮಾಡಿಸಲು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಯಾವುದೇ ಅಧಿಕಾರ ಇಲ್ಲ. ಅಲ್ಲದೆ ವಲಯದ ಜಂಟಿ ಆಯುಕ್ತರು ಅಥವಾ ವಲಯ ಆಯುಕ್ತರ ಅನುಮತಿಯನ್ನೂ ಪಡೆದಿಲ್ಲ. ಸ್ವಇಚ್ಛೆಯಿಂದ ಪೊಲೀಸ್ ಬಂದೋಬಸ್ತಿಗೆ ಪತ್ರ ಬರೆದು, ತೆರವು ಕಾರ್ಯಾಚರಣೆ ಮಾಡಿ ಗಂಭೀರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಕರ್ತವ್ಯದಿಂದ ಬಿಬಿಎಂಪಿಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಹಿಂದುರಿಗಿಸಲು ಸರ್ಕಾರದ ನಗರಾಭಿವೃದ್ಧಿ ಇಲಾಖೆ ವಶಕ್ಕೆ ನೀಡಲಾಗಿದೆ.

ಒತ್ತುವರಿ ತೆರವಿನ ಮಾಹಿತಿ ಆಯುಕ್ತರಿಗೆ ಇರಲಿಲ್ಲ, ಕಚೇರಿಯಲ್ಲಿ ವಿಚಾರಣೆ ನಡೆಸಿದಾಗ ಮೇಲ್ನೋಟಕ್ಕೆ ಅಧಿಕಾರ ಲೋಪ ಕಂಡು ಬಂದಿದೆ. ಹೀಗಾಗಿ ಮಾತೃ ಇಲಾಖೆಗೆ ಮರಳಿ ವರ್ಗಾಯಿಸಲಾಗಿದೆ.

Comments

Leave a Reply

Your email address will not be published. Required fields are marked *