ಡಿಎಲ್ ಕ್ಯಾಂಪ್‍ಗೆ 10 ಸಾವಿರ ಮಂದಿ – ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

ಬೆಂಗಳೂರು: ಪೊಲೀಸರು ಹೊಸಕೋಟೆ ನಗರದ ಚೆನ್ನಬೈರೇಗೌಡ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚಾಲನಾ ಪರವಾನಿಗೆ(ಡಿಎಲ್) ಕ್ಯಾಂಪ್‍ಗೆ ನಿರೀಕ್ಷೆಗೂ ಮೀರಿದ ಜನ ಬಂದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್‍ಪಿ ರವಿ ಡಿ ಚೆನ್ನಣ್ಣನವರ್ ನೇತೃತ್ವದಲ್ಲಿ ಆಯೋಜನೆ ಮಾಡಿರುವ ಈ ಕ್ಯಾಂಪಿಗೆ 10 ಸಾವಿರ ಜನರು ಅರ್ಜಿ ಹಾಕಿದ್ದಾರೆ. ಡಿಎಲ್‍ಗೆ ನೂತನವಾಗಿ ಅರ್ಜಿ ಹಾಕಲು ನೂಕು ನುಗ್ಗಲು ಉಂಟಾಗಿದ್ದು, ನಾ ಮುಂದು ತಾ ಮುಂದು ಎಂದು ಜನ ಅಪ್ಲೀಕೇಶನ್ ಹಾಕುತ್ತಿದ್ದಾರೆ.

ಕ್ಯಾಂಪ್‍ಗೆ ನಿರೀಕ್ಷೆಗೂ ಮೀರಿದ ಜನ ಆಗಮಿಸಿದ ಹಿನ್ನೆಲೆ ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಆರ್.ಟಿ.ಒ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಡಿಎಲ್‍ಗಾಗಿ ಸಾವಿರಾರು ಜನರು ಕಿಲೋ ಮೀಟರ್‍ ಗಟ್ಟಲೇ ಸಾಲುಗಟ್ಟಿ ನಿಂತಿದ್ದು, ಕೇವಲ ನಾಲ್ಕು ಕಂಪ್ಯೂಟರ್ ಮತ್ತು ಬೆರಳಿಕೆಯಷ್ಟು ಜನ ಸಿಬ್ಬಂದಿ ನಿಯೋಜನೆ ಮಾಡಿರುವುದು ಎಷ್ಟು ಸರಿ ಎಂದು ಅರ್ಜಿದಾರರು ಪ್ರಶ್ನೆ ಮಾಡಿದ್ದಾರೆ.

ಈ ಡಿಎಲ್ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದು, ಮೊದಲೇ ದಿನವಾದ ಇಂದು ಹೊಸಕೋಟೆ ನಗರದಲ್ಲಿ ಪ್ರಾರಂಭ ಮಾಡಲಾಗಿದೆ. ಈ ಕ್ಯಾಂಪ್‍ನ ಬಗ್ಗೆ ಸ್ಥಳೀಯ ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿತ್ತು. ಹೀಗಾಗಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಜಾಸ್ತಿ ಪ್ರಮಾಣದಲ್ಲಿ ಬಂದಿದ್ದಾರೆ.

ಮೊದಲೇ ದಿನವಾದ ಇಂದು ಕೇವಲ 500 ರಿಂದ ಸಾವಿರ ಜನ ಬರಬಹುದು ಎಂದು ಅಂದಾಜು ಮಾಡಿದ್ದ ಪೊಲೀಸ್ ಮತ್ತು ಆರ್.ಟಿ.ಒ ಇಲಾಖೆ ಕೇವಲ 4 ಡೆಸ್ಕ್ ಗಳನ್ನು ಮಾತ್ರ ನಿಯೋಜನೆ ಮಾಡಿತ್ತು. ಆದರೆ ದಲ್ಲಾಳಿ ಕಡೆಯಿಂದ ಹೋದರೆ ದುಡ್ಡು ಜಾಸ್ತಿಯಾಗುತ್ತದೆ. ಇಲ್ಲಿ ಮಾಡಿಸಿದರೆ ಸರ್ಕಾರ ನಿಗದಿ ಮಾಡಿದ ಶುಲ್ಕ ಪಾವತಿಸಿದರೆ ಡಿಎಲ್ ಸಿಗುತ್ತೆ ಎಂಬ ಕಾರಣಕ್ಕೆ ಬಹಳಷ್ಟು ಜನ ಆಗಮಿಸಿದ್ದಾರೆ.

Comments

Leave a Reply

Your email address will not be published. Required fields are marked *