ವಿಚಾರಣೆಗೆ ಹಾಜರಾಗಿ – ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್

ಬೆಂಗಳೂರು: ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಕ್ಯಾರೆ ಅನ್ನದ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಕುಟುಂಬದ ಸದಸ್ಯರು ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಬಾಡಿಗೆ ಕಟ್ಟದೇ ಮನೆಯ ಮಾಲೀಕ ಜಿ.ಆರ್.ಪ್ರಸನ್ನ ಜೊತೆ ಜಗಳ ಮಾಡಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುವ ಆರೋಪ ರಾಜೇಂದ್ರ ಸಿಂಗ್ ಬಾಬು ಮೇಲಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು 12 ದಿನಗಳಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಪೊಲೀಸ್ ಸೂಚನೆಗೆ ರಾಜೇಂದ್ರ ಸಿಂಗ್ ಬಾಬು ಕುಟುಂಬ, ನಾವು ಹೊರದೇಶದಲ್ಲಿ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈಗ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದೇನೆ ಎಂದು ಮನೆ ಮಾಲೀಕ ಪ್ರಸನ್ನ ತಿಳಿಸಿದ್ದಾರೆ.

ಏನಿದು ಪ್ರಕರಣ?
ರಾಜೇಂದ್ರ ಸಿಂಗ್ ಬಾಬು ಮತ್ತು ಅವರ ಮಗ ಆದಿತ್ಯ ಮತ್ತು ಮಗಳು ಹಾಗೂ ಅವರ ಪತ್ನಿ ಕಳೆದ ನಾಲ್ಕು ವರ್ಷದಿಂದ ಸದಾಶಿವನಗರದ ಆರ್‍ಎಂವಿ ಎಕ್ಷಟೆನ್ಷನ್‍ನಲ್ಲಿರುವ ಪ್ರಸನ್ನ ಎಂಬುವವರ ಮನೆಯಲ್ಲಿ ಬಾಡಿಗೆಯಲ್ಲಿದ್ದಾರೆ. ನಾಲ್ಕು ವರ್ಷದಿಂದ ತಿಂಗಳಿಗೆ 40 ಸಾವಿರ ಬಾಡಿಗೆ ನೀಡಲಾಗುತ್ತಿತ್ತು. ಆದರೆ ಮನೆಯ ಮಾಲೀಕ ಮನೆಯ ಬಾಡಿಗೆಯನ್ನು ಏರಿಕೆ ಮಾಡಿ 48 ಸಾವಿರ ಕೊಡಲು ಹೇಳಿದ್ದಾರೆ. ಇದಕ್ಕೆ ಒಪ್ಪದ ರಾಜೇಂದ್ರ ಸಿಂಗ್ ಬಾಬು ಅವರು ಕಳೆದ 7 ತಿಂಗಳಿನಿಂದ 2 ಲಕ್ಷ 88 ಸಾವಿರ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಮನೆ ಮಾಲೀಕ ಪ್ರಸನ್ನ ಅವರು ಕೋರ್ಟ್‍ಗೆ ಎವಿಕ್ಷನ್ ಕೇಸ್ ನೀಡಿದ್ದರು. ಸದ್ಯ ಈಗ ಮನೆ ಖಾಲಿ ಮಾಡಿಸಿ ಕೊಡುವಂತೆ ಪೊಲೀಸರಿಗೆ ಮೇ 2 ರಂದು ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *