10ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ – ಬಿಜೆಪಿಯ ಬಂಡಿ ಸಂಜಯ್ ಕುಮಾರ್ ಬಂಧನ

ಹೈದರಾಬಾದ್: ತೆಲಂಗಾಣ (Telangana) ಬಿಜೆಪಿ (BJP) ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಅವರನ್ನು ಎಸ್‍ಎಸ್‍ಎಲ್‍ಸಿ ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಮೇಳೆ ಪೊಲೀಸರು ಬಂಧಿಸಿದ್ದಾರೆ.

10ನೇ ತರಗತಿ ಹಿಂದಿ ಪರೀಕ್ಷೆ ಸೋಮವಾರ ಬೆಳಗ್ಗೆ 9.30ಕ್ಕೆ ಆರಂಭಗೊಂಡಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ವಾರಂಗಲ್ ಜಿಲ್ಲೆಯಲ್ಲಿ ಮೊದಲು ವಾಟ್ಸಾಪ್ ಗ್ರೂಪ್‍ಗಳಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋಗಳು ಹರಿದಾಡಿದ್ದು, ಅದಾದ ಬಳಿಕ ರಾಜ್ಯಾದ್ಯಂತ ಹರಿದಾಡುತ್ತಿದೆ.

ವಾರಂಗಲ್ ಪೊಲೀಸ್ ಕಮಿಷನರ್ ಎ ವಿ ರಂಗನಾಥ್ ಮಾತನಾಡಿ, ಪರೀಕ್ಷೆ ಆರಂಭಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಹೊರಬಿದ್ದಿದ್ದರೆ ಸೋರಿಕೆಯಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಪರೀಕ್ಷೆ ಪ್ರಾರಂಭವಾದ ಅರ್ಧ ಗಂಟೆಯ ನಂತರ ಪ್ರಶ್ನೆ ಪತ್ರಿಕೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಹನಮಕೊಂಡದ ಕಮಲಾಪುರದ ಪರೀಕ್ಷಾ ಕೇಂದ್ರದಲ್ಲಿ ಸೋರಿಕೆಯಾಗಿದೆ ಎಂದರು.

ಘಟನೆಯಲ್ಲಿ ಸಂಜಯ್‌ ಕುಮಾರ್‌ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕರೀಂನಗರ ಪೊಲೀಸರ ವಿಶೇಷ ತಂಡವು ಸಂಜಯ್ ಅವರ ನಿವಾಸಕ್ಕೆ ತೆರಳಿ ಬಂಧಿಸಿದರು. ಈ ವೇಳೆ ಬಂಧನವನ್ನು ತಡೆಯಲು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಅವರನ್ನು ವಶಕ್ಕೆ ಪಡೆಯಲಾಯಿತು. ಇದನ್ನೂ ಓದಿ: ಖಾನಾಪುರದಲ್ಲಿ ಪೊಲೀಸರ ದಾಳಿ- ದಾಖಲೆ ಇಲ್ಲದ 53 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

ಈ ಬಗ್ಗೆ ಸಂಜಯ್ ಮಾತನಾಡಿ, ಏಪ್ರಿಲ್ 8 ರಂದು ಸಿಕಂದರಾಬಾದ್‍ನಿಂದ ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಆಗಮಿಸಲಿದ್ದಾರೆ. ಅವರ ವ್ಯವಸ್ಥೆಗೆ ಅಡ್ಡಿಪಡಿಸಲು ಬಿಆರ್‌ಎಸ್ ಸರ್ಕಾರದ ಪ್ರಯತ್ನವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಗುಬ್ಬಿ ಟಿಕೆಟ್ ಆಕಾಂಕ್ಷಿ ಪ್ರಸನ್ನಕುಮಾರ್ ಉಚ್ಚಾಟನೆ