ಸಿನಿಮೀಯ ರೀತಿ ಕಾರ್ ಚೇಸಿಂಗ್- ಬಜರಂಗದಳ ಕಾರ್ಯಕರ್ತ ದೀಪಕ್ ಹತ್ಯೆಗೈದ ಶಂಕಿತರು ವಶಕ್ಕೆ

ಮಂಗಳೂರು: ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಬಜರಂಗದಳದ ಕಾಯಕರ್ತ ದೀಪಕ್ ರಾವ್(32) ಹತ್ಯೆಗೈದ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆ ಕೃತ್ಯದ ಬಳಿಕ ಪರಾರಿಯಾಗುತ್ತಿದ್ದ ನಾಲ್ವರು ಶಂಕಿತ ಆರೋಪಿಗಳನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಡುಬಿದಿರೆ ಮೂಲಕ ಪರಾರಿಯಾಗುತ್ತಿದ್ದ ಸ್ವಿಫ್ಟ್ ಕಾರನ್ನು ಮುಲ್ಕಿ ಸಬ್ ಇನ್ಸ್ ಪೆಕ್ಟರ್ ಶೀತಲ್ ಕುಮಾರ್ ಬೆನ್ನಟ್ಟಿದ್ದು ಮಿಜಾರು ಎಂಬಲ್ಲಿ ಫೈರಿಂಗ್ ಮಾಡಿ ಅಡ್ಡಗಟ್ಟಿದ್ದಾರೆ. ಆ ಬಳಿಕ ಅದರಲ್ಲಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೂರ್ವ ದ್ವೇಷದಿಂದ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕ ಸುರತ್ಕಲ್‍ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂದಿನ ಗಾಜು ಪುಡಿಪುಡಿಯಾಗಿದೆ.

ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರದಲ್ಲಿ  ಬಂದ್ ಆಗಿದ್ದು,  ಮಾಲೀಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚುತ್ತಿದ್ದಾರೆ. ಸುರತ್ಕಲ್ ನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ಅವರನ್ನು ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಅಷ್ಟರಲ್ಲಿ ತೀವ್ರ ಗಾಯಗೊಂಡಿದ್ದ ದೀಪಕ್ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಸ್ ಆಗುತ್ತಿದ್ದ  ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದವರು ಬೈಕನ್ನು ಅಡ್ಡಗಟ್ಟಿ ಮೂಡಾಯಿಕೋಡಿ ಎಂಬಲ್ಲಿ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ. ಈ ಕೃತ್ಯ ಎಸಗುತ್ತಿದ್ದಾಗ ಅಲ್ಲಿದ್ದ ಕೆಲ ಮುಸ್ಲಿಮರು ಕಲ್ಲನ್ನು ದುಷ್ಕರ್ಮಿಗಳ ಮೇಲೆ ಎಸೆದಿದ್ದಾರೆ. ಸುರತ್ಕಲ್ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

Comments

Leave a Reply

Your email address will not be published. Required fields are marked *