ಕನಕಪುರ ಬಂಡೆಗೆ ಶನಿವಾರ ಶುಭವೋ, ಅಶುಭವೋ?

ನವದೆಹಲಿ: ದೆಹಲಿಯ ತಿಹಾರ್ ಜೈಲಲ್ಲಿ 2ನೇ ರಾತ್ರಿ ಕಳೆದಿರುವ ಮಾಜಿ ಸಚಿವ ಡಿಕೆಶಿವಕುಮಾರ್‍ಗೆ ಶನಿವಾರ ಶುಭವೋ ಅಶುಭವೋ..? ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಒಂದು ದಿನದ ಮುಂದೂಡಿಕೆ ಬಳಿಕ ಇವತ್ತು ಮತ್ತೆ ಆರಂಭವಾಗಲಿದೆ.

ಇಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಮತ್ತೆ ವಾದ ಮಾಡುವ ಸಾಧ್ಯತೆಗಳಿವೆ. ಇಡಿ ಮಾಡಿರುವ ಹೊಸ ಆರೋಪಗಳಿಗೆ ಡಿಕೆಶಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಪ್ರತಿವಾದ ಮಾಡಬಹುದು. ‘ಆಸ್ತಿ ಬಗ್ಗೆ ಘೋಷಿಸಿಕೊಂಡು ತೆರಿಗೆ ಕಟ್ಟಿದ ಮಾತ್ರಕ್ಕೆ ಅಕ್ರಮ ಆಸ್ತಿ ಸಕ್ರಮ ಆಗಲ್ಲ. ಆ ಆಸ್ತಿ ಹೇಗೆ ಬಂತು ಅನ್ನೋದನ್ನು ವಿವರಿಸಬೇಕು. ಡಿಕೆಶಿ ತಮ್ಮನ್ನು ಕೃಷಿಕ ಅಂತ ಹೇಳಿಕೊಂಡಿದ್ದಾರೆ. ಅದರಿಂದ 20 ವರ್ಷಗಳಿಂದ ಬಂದ ಆದಾಯ 1.38 ಕೋಟಿ ರೂಪಾಯಿ ಎಂದಿದ್ದಾರೆ. ಆ 1.38 ಕೋಟಿ ರೂಪಾಯಿಯನ್ನ ಹೂಡಿಕೆ ಮಾಡಿ 800 ಕೋಟಿ ರೂಪಾಯಿ ಆಸ್ತಿ ಹೇಗೆ ಪಡೆದರು ಅನ್ನೋದೇ ನಂಬಲು ಅಸಾಧ್ಯ’ ಎಂದು ಇಡಿ ನ್ಯಾಯಾಲಯದಲ್ಲಿ ಹೇಳಿತ್ತು.

ಇಡಿ ಆರೋಪಕ್ಕೆ ಆಕ್ಷೇಪಿಸಿದ್ದ ಡಿಕೆಶಿ ಪರ ವಕೀಲರು ಕೇವಲ ಕೃಷಿ ಆದಾಯದಿಂದಷ್ಟೇ 800 ಕೋಟಿ ಆಸ್ತಿ ಸೃಷ್ಟಿ ಆಗಿದೆ ಎಂದು ಡಿಕೆ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಪ್ರತಿವಾದಿಸಿದ್ದರು. ಈಗಾಗಲೇ ಎರಡು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿರುವ ಇಡಿ ವಿಶೇಷ ಕೋರ್ಟ್ ಇಂದು ಬೆಳಗ್ಗೆ ಹನ್ನೊಂದು ಗಂಟೆಯಿಂದ ಮೂರನೇ ದಿನದ ವಾದ ಆಲಿಸಲಿದೆ.

ಇವತ್ತು ಕೋರ್ಟಿನಲ್ಲಿ ವಾದ-ಪ್ರತಿವಾದ ಅಂತ್ಯ ಆಗಿ ಕೋರ್ಟ್ ಇವತ್ತೇ ಜಾಮೀನು ಮಂಜೂರು ಮಾಡುತ್ತಾ..? ಜಾಮೀನು ಅರ್ಜಿ ತಿರಸ್ಕಾರ ಮಾಡುತ್ತಾ ಅಥವಾ ಆದೇಶವನ್ನ ಕಾಯ್ದಿರಿಸುತ್ತಾ ಕಾದು ನೋಡಬೇಕಿದೆ. ಜಾಮೀನಿಗೆ ಅನಾರೋಗ್ಯವನ್ನೇ ಡಿಕೆಶಿ ವಕೀಲರು ಪ್ರಮುಖವಾಗಿ ಕಾರಣವಾಗಿ ಕೊಟ್ಟಿದ್ದರು. ಆದರೆ ಗುರುವಾರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಡಿಕೆಶಿಯನ್ನ ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *