ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಕೊಳೆತ ಸ್ಥಿತಿಯಲ್ಲಿ ನಾಯಿಗಳ ಶವ

ಬಾಗಲಕೋಟೆ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರ ಮಾಡಿದರೆ ಶವಾಗಾರದಲ್ಲೇ ಎರಡು ನಾಯಿಗಳು ಸತ್ತು ಕೊಳೆತ ಸ್ಥಿತಿಯಲ್ಲಿರೋದು ಕಂಡು ಗ್ರಾಮಸ್ಥರು ದಂಗಾಗಿದ್ದಾರೆ.

ಬಾಗಲಕೋಟೆ ತಾಲೂಕಿನ ರಾಂಪುರ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಇದು ಸಾಕ್ಷಿ ಆಗಿದೆ. 25 ವರ್ಷದ ಪವಾಡೆಪ್ಪ ಗೌಡರ ಎಂಬ ವ್ಯಕ್ತಿ ರಾಂಪುರ ಗ್ರಾಮದ ಬಳಿ ಬೈಕ್ ನಿಂದ ಬಿದ್ದು ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದ. ಈತನ ಮರಣೋತ್ತರ ಪರೀಕ್ಷೆಗೆ ಎಂದು ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆದರೆ ಮರಣೋತ್ತರ ಪರೀಕ್ಷೆ ಮಾಡೋಕೆ ಯಾವುದೇ ವೈದ್ಯರು ಕೂಡ ಆಸ್ಪತ್ರೆಯಲ್ಲಿರಲಿಲ್ಲ. ಇದರಿಂದ ಸುಮಾರು ನಾಲ್ಕು ತಾಸುಗಳ ಕಾಲ ಸಂಬಂಧಿಕರು ಕಾಯಬೇಕಾಯಿತು. ನಂತರ ಸ್ಥಳಕ್ಕೆ ಬಂದ ವೈದ್ಯ ಎಸ್ ವಿ ಲೇಬಗಿರಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಇದೊಂದು ಕಡೆಯಾದ್ರೆ ಶವಾಗಾರದಲ್ಲಿ ನಾಲ್ಕು ದಿನಗಳ ಹಿಂದೆಯೇ ಎರಡು ನಾಯಿಗಳು ಸತ್ತಿದ್ದು, ಕೊಳೆತ ಸ್ಥಿತಿಯಲ್ಲಿ ನಾಯಿಗಳ ದೇಹಗಳು ಬಿದ್ದಿವೆ. ಆದರೂ ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಮಾಡಿಲ್ಲ. ರಾಂಪುರ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *