ಕುರಿ ಸಂತೆಯಲ್ಲಿ ಕಲ್ಲು ತೂರಾಟ-ರಸ್ತೆ ಬಿಡಿ ಎಂದಿದ್ದಕ್ಕೆ ಹಲ್ಲೆ

ಬಾಗಲಕೋಟೆ: ಕುರಿ ಸಂತೆಯಲ್ಲಿ ರಸ್ತೆ ಬಿಡಿ ಎಂದು ಕೇಳಿದ್ದಕ್ಕೆ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮಿನಗಡ ಪಟ್ಟಣದಲ್ಲಿ ನಡೆದಿದೆ.

ಶನಿವಾರ ಈ ಗಲಾಟೆ ನಡೆದಿದ್ದು, ಮಹಾಂತೇಶ್ ಬಾರಡ್ಡಿ ಎಂಬವರು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ. ಸದ್ಯ ಮಹಾಂತೇಶ್, ಬಾಗಲಕೋಟೆ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಂತೇಶ್ ಜೊತೆಯಲ್ಲಿದ್ದ ಸಂಗಪ್ಪ ಹೂಗಾರ, ಸಂಜೀವ್ ಬೇವೂರ ಎಂಬವರಿಗೂ ಸಹ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.

ಪ್ರತಿ ಶನಿವಾರ ಅಮಿನಗಡ ಪಟ್ಟಣದಲ್ಲಿ ಕುರಿ ಸಂತೆ ನಡೆಯುತ್ತದೆ ಅದಕ್ಕಾಗಿ ನಿಗದಿತ ಜಾಗವಿದ್ದರೂ, ಮುಖ್ಯರಸ್ತೆಯಲ್ಲೇ ಕುರಿ ವಹಿವಾಟು ನಡೆಸಲಾಗುತ್ತದೆ. ನಿನ್ನೆಯೂ ಹೀಗೆ ರಸ್ತೆಯ ಮೇಲೆ ಕುರಿ ವ್ಯಾಪಾರ ಜೋರಾಗಿತ್ತು, ಹೀಗಾಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಇದೇ ವೇಳೆ ಅಲ್ಲಿಗೆ ಕಾರ್ ನೊಂದಿಗೆ ಆಗಮಿಸಿದ್ದ ಮಹಾಂತೇಶ್, ರಸ್ತೆ ಬಿಡಿ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಕುರಿ ವಹಿವಾಟು ನಡೆಸುವವರ ಪೈಕಿ ಕೆಲ ದುಷ್ಕರ್ಮಿಗಳು ಮಹಾಂತೇಶ್ ಸೇರಿದಂತೆ ಮೂವರ ಹಲ್ಲೆ ನಡೆಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಮಹಾಂತೇಶ್ ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿ ತಲುಪುವಂತಾಗಿದೆ. ನೆಲಕ್ಕೆ ಬೀಳಿಸಿ 8-10 ಜನ ಸೇರಿ ಹೊಡೆಯುವ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದ್ದು, ಸದ್ಯ ಅದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದಲ್ಲದೇ ಅಲ್ಲಿದ್ದ ಮೂರ್ನಾಲ್ಕು ವಾಹನಗಳ ಗಾಜುಗಳ ಮೇಲೆ ಈ ದುಷ್ಕರ್ಮಿಗಳ ಗುಂಪು ಕಲ್ಲು ತೂರಿದ್ದಾರೆ. ಅಮಿನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ಬಾರಿ ವೈರಲ್ ಆಗಿದೆ. ವಿಷಯ ತಿಳಿದ ಡಿವೈಎಸ್.ಪಿ ನಂದರಡ್ಡಿ ದೂರು ದಾಖಲಿಸಿಕೊಂಡು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳೊವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *