ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳಲ್ಲಿ ಸಂಚರಿಸೋ ವಾಹನ ಸವಾರರಿಗೆ ಕಹಿ ಸುದ್ದಿ

ಬೆಂಗಳೂರು: ವಾಹನ ಸವಾರರಿಗೆ ಇದು ಕಹಿ ಸುದ್ದಿ. ಬೆಂಗಳೂರಿನ ಟ್ರಾಫಿಕ್‍ನಲ್ಲಿ ಒದ್ದಾಡುವವರು ತಪ್ಪದೇ ಈ ಸುದ್ದಿಯನ್ನು ಓದ್ಲೇಬೇಕು. ಯಾಕೆ ಅಂದ್ರೇ ಬೆಂಗಳೂರಿನ ಹೃದಯಭಾಗದ ಕೆಲ ರಸ್ತೆಗಳು ಬಂದ್ ಆಗಲಿವೆ.

ಉದ್ಯಾನ ನಗರಿ ಬೆಂಗಳೂರಿನ ಹೃದಯ ಭಾಗದ ನಾಲ್ಕು ರಸ್ತೆ ಬಂದ್ ಆಗುವ ಸಾಧ್ಯತೆಗಳಿವೆ. ಬೆಂಗಳೂರಿನ ಸೆಂಟರ್ ಆಫ್ ಪಾಯಿಂಟ್ ಕಬ್ಬನ್ ಪಾರ್ಕಿನ ಒಳಗೆ ನಾಲ್ಕು ಗೇಟ್‍ಗಳನ್ನ ಬಂದ್ ಮಾಡಬೇಕು ಅನ್ನೊ ಪ್ರಸ್ತಾವನೆಯನ್ನ ತೋಟಗಾರಿಕಾ ಇಲಾಖೆ ಮಾಡಿದೆ. ಭಾನುವಾರ ಮಾತ್ರ ವಾಹನ ಓಡಾಟಕ್ಕೆ ನಿರ್ಬಂಧವಿತ್ತು. ಅದರೆ ಈಗ 4 ಗೇಟ್‍ಗಳಿಗೆ ಬೀಗ ಬೀಳುವ ಸಾಧ್ಯತೆಯಿದೆ. ವಿಪರೀತವಾಗಿ ಹೆಚ್ಚುತ್ತಿರುವ ಮಾಲಿನ್ಯವನ್ನ ತಡೆಯುವ ನಿಟ್ಟಿನಲ್ಲಿ ಈ ರಸ್ತೆಗಳನ್ನು ಮುಚ್ಚಲೇಬೇಕು ಅನ್ನೋದು ತೋಟಗಾರಿಕಾ ಇಲಾಖೆಯ ಒತ್ತಾಯವಾಗಿದೆ.

ಬಾಲಭವನ ಗೇಟ್, ಬಿಎಸ್‍ಎನ್‍ಎಲ್ ಗೇಟ್, ಹಡ್ಸನ್ ಗೇಟ್, ಕೆಆರ್ ಸರ್ಕಲ್ ಗೇಟ್ ಈ ನಾಲ್ಕು ಗೇಟ್‍ಗಳಲ್ಲಿ ಎರಡನ್ನು ಮುಚ್ಚೋದು ಗ್ಯಾರೆಂಟಿ. ಇನ್ನೆರಡು ಗೇಟ್‍ಗಳನ್ನು ಮುಚ್ಚುವ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವ ನಿರ್ಧಾರಕ್ಕೆ ಬರಬಹುದು ಅನ್ನೋದು ಇನ್ನು ಕೆಲ ದಿನಗಳಲ್ಲಿ ಗೊತ್ತಾಗಲಿದೆ.

ಒಂದು ಕಡೆ ಉದ್ಯಾನನಗರಿ ಎನ್ನುವ ಹೆಸರಿಗೆ ಕಾರಣವಾಗಿರುವ ಸುಮಾರು 200 ಎಕರೆಯ ಕಬ್ಬನ್ ಪಾರ್ಕನ್ನು ಪಾರ್ಕ್ ಆಗಿಯೇ ಉಳಿಸಬೇಕು ಎನ್ನುವ ಒತ್ತಾಯವನ್ನು ವಾಕರ್ಸ್ ಆಸೋಸಿಯೆಶನ್ ಅಧ್ಯಕ್ಷ ಉಮೇಶ್ ಮಾಡಿದ್ದಾರೆ. ಆದ್ರೆ ಮತ್ತೊಂದು ಕಡೆ ವಾಹನ ಸವಾರರು ಸುಮಾರು ಎರಡು ವರ್ಷಗಳಿಂದ ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳನ್ನ ಬಳಸುತ್ತಿದ್ದು, ಈಗ ಈ ಪ್ರಸ್ತಾಪಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿ ಗೇಟ್‍ಗಳನ್ನ ಮುಚ್ಚಿದ್ರೆ ನಾವು ಮೂರು-ನಾಲ್ಕು ಕಿ.ಮೀ. ಸುತ್ತಿ ಬರಬೇಕು. ತುಂಬಾ ಸಮಸ್ಯೆ ಎದುರಿಸಬೇಕಾಗುತ್ತೆ. ನಮ್ಮ ಟೈಮ್ ಸಹ ವೇಸ್ಟ್ ಆಗುತ್ತೆ ಅನ್ನೋದು ವಾಹನ ಸವಾರರ ಅಳಲು.

ಒಂದು ಕಡೆ ಕಬ್ಬನ್ ಪಾರ್ಕ್ ರಕ್ಷಣೆ ಮಾಡಬೇಕು ಅನ್ನೊದಾದ್ರೇ ಇನ್ನೊಂದು ಕಡೆ ಈ ಬೆಂಗಳೂರು ಟ್ರಾಫಿಕ್ ತಲೆನೋವು. ಸರ್ಕಾರ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುತ್ತೋ ಅಥವಾ ಮಾಲಿನ್ಯ ಕಡಿಮೆ ಮಾಡಿ ಪಾರ್ಕಿನ ರಕ್ಷಣೆ ಮಾಡುತ್ತೋ ಕಾದುನೋಡಬೇಕಿದೆ

 

Comments

Leave a Reply

Your email address will not be published. Required fields are marked *