ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

ಕೊಡಗು: ತಾಯಿಯಿಂದ ಬೇರ್ಪಟ್ಟು ಅಡವಿಯ ಮಡಿಲಲ್ಲಿ ಒಂಟಿಯಾಗಿದ್ದ ಮುದ್ದಾದ ಮರಿಯಾನೆಗೆ ಕೊನೆಗೂ ಆಶ್ರಯ ಸಿಕ್ಕಿದೆ. ಅನಾಥವಾಗಿದ್ದ ಮರಿಯಾನೆಯನ್ನು ನಾಗರಹೊಳೆಯ ಅರಣ್ಯಾಧಿಕಾರಿಗಳು ಹಿಡಿದು ಕೊಡಗಿನ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ನೀಡಿದ್ದಾರೆ. ಮುದ್ದಾದ ಮರಿಯಾನೆಯನ್ನು ಮಾವುತರು ಪಾಲನೆ ಪೋಷಣೆ ಮಾಡುತ್ತಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮೇಟಿಕೊಪ್ಪೆ ವನ್ಯಜೀವಿ ವಲಯದಲ್ಲಿ 20 ದಿನದ ಆನೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ಅನಾಥವಾಗಿ ಅಲೆದಾಡುತ್ತಿತ್ತು. ಸದ್ಯ ಮರಿ ಆನೆ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮಾವುತ ಶಿವು ಎಂಬವರ ಆರೈಕೆಯಲ್ಲಿದೆ. ದಿನಕ್ಕೆ 10 ಲೀಟರ್ ಹಾಲನ್ನು ನಿಪ್ಪಲ್ ಮೂಲಕ ಆನೆ ಮರಿಗೆ ನೀಡಲಾಗುತ್ತಿದೆ. ಮತ್ತಿಗೋಡು ಶಿಬಿರದ ಸಿಬ್ಬಂದಿ ಹಾಗೂ ಪಶುವೈದ್ಯರು ಮರಿಯಾನೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಇದೀಗ ಮರಿಯಾನೆಗೆ 1.5 ತಿಂಗಳಾಗಿದೆ.

ಒಟ್ಟಾರೆ ತಾಯಿಯಿಂದ ದೂರಾಗಿ, ತಾಯಿ ಪ್ರೀತಿ ಮರಿಚಿಕೆಯಾದ ಮುದ್ದಾದ ಆನೆಮರಿಗೆ ಮತ್ತಿಗೋಡು ಸಾಕಾನೆ ಶಿಬಿರದ ಅರಣ್ಯ ಇಲಾಖೆ ಸಿಬ್ಬಂದಿಯ ಪ್ರೀತಿ ಸಿಕ್ಕಿದೆ. ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮರಿಯಾನೆ ತುಂಟಾಟವಾಡುತ್ತಾ ಶಿಬಿರದಲ್ಲಿ ಕಾಲ ಕಳೆಯುತ್ತಿದೆ.

 

Comments

Leave a Reply

Your email address will not be published. Required fields are marked *