ಬಿಎಸ್‌ವೈ ಆಡಿಯೋ ಪ್ರಕರಣ-ತನಿಖೆ ವೇಳೆ ಮತ್ತೊಂದು ಸತ್ಯ ಬಯಲು

ಹುಬ್ಬಳ್ಳಿ: ಸಿಎಂ ಬಿಎಸ್ ಯಡಿಯೂರಪ್ಪ ಆಡಿಯೋ ಬಿಡುಗಡೆ ಪ್ರಕರಣಕ್ಕೆ ಇದೀಗ ಬಿಗ್ ಟಿಸ್ಟ್ ದೊರೆತಿದೆ. ಸಿಎಂ ಬಿಎಸ್‌ವೈ ಸಂಭಾಷಣೆ ರೆಕಾರ್ಡ್ ಮಾಡಿದ್ಯಾರು ಅಂತಾ ತನಿಖೆ ನಡೆಸುತ್ತಿರುವ ಅಧಿಕಾರಿಗಳೇ ಬೆಚ್ಚಿಬೀಳುವ ಸತ್ಯವೊಂದು ಇದೀಗ ಬಯಲಾಗಿದೆ.

ಅಕ್ಟೋಬರ್ 26ರಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸಂಭಾಷಣೆ ರೆಕಾರ್ಡ್ ಆಗಿದ್ದು, ವೈರಲ್ ಆಗಿತ್ತು. ಸಭೆಯಲ್ಲಿ ಅನರ್ಹ ಶಾಸಕರ ಬಗ್ಗೆ ಸಿಎಂ ಬಿಎಸ್‌ವೈ ಮಾತನಾಡಿದ ಆಡಿಯೋ ಇದೀಗ ಸುಪ್ರೀಂಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ.

ಸಭೆ ನಡೆದ ದಿನದಂದು ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನ ಎಲ್ಲಾ ಸಿಸಿ ಕ್ಯಾಮೆರಾಗಳು ಆನ್ ಆಗಿದ್ರು, ಸಭೆ ನಡೆದ ಹಾಲ್‌ನಲ್ಲಿನ ಸಿಸಿ ಕ್ಯಾಮೆರಾಗಳು ಆಫ್ ಆಗಿರೋದು ಇದೀಗ ತನಿಖೆಗೆ ಅಡ್ಡಿಯಾಗಿದೆ. ಸಭೆಯ ನಡೆದ ಹಾಲ್‌ನಲ್ಲಿನ ಕ್ಯಾಮೆರಾಗಳನ್ನ ಆಫ್ ಮಾಡಲು ಸೂಚಿಸಿದ್ಯಾರು ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಈ ಬಗ್ಗೆ ವಿವರಣೆ ನೀಡುವಂತೆ ಹೋಟೆಲ್ ಮ್ಯಾನೇಜರ್‌ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಇಂದು ಹೋಟೆಲ್ ಮ್ಯಾನೇಜರ್ ಬೆಂಗಳೂರಿಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಸಭೆಯಲ್ಲಿ ನಡೆಯೋ ವಿಚಾರಗಳನ್ನ ರೆಕಾರ್ಡ್ ಮಾಡಲೆಂದೇ ಹಾಲ್‌ನಲ್ಲಿದ್ದ ಸಿಸಿ ಕ್ಯಾಮೆರಾಗಳನ್ನ ಆಫ್ ಮಾಡಿಸಲಾಗಿತ್ತು ಅನ್ನೋದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ. ಹಾಲ್ ಹೊರಭಾಗದ ಕಾರಿಡಾರ್ ಸೇರಿದಂತೆ ಎಲ್ಲಡೆಯ ಸಿಸಿ ಕ್ಯಾಮೆರಾಗಳು ಆನ್ ಆಗಿದ್ರೂ, ಹಾಲ್ ಒಳಗಿದ್ದ ಸಿಸಿ ಕ್ಯಾಮೆರಾಗಳು ಆಫ್ ಮಾಡಲು ಸೂಚಿಸಿದ್ಯಾರು ಎಂಬುದರ ಬಗ್ಗೆ ಇದೀಗ ತನಿಖೆ ತೀವ್ರಗೊಂಡಿದೆ.

ಗುಪ್ತಚರ ಇಲಾಖೆ ಅಧಿಕಾರಿಗಳು ಹಾಲ್ ಒಳಗೆ ಯರ‍್ಯಾರು ಹೋಗಿದ್ರು. ಯರ‍್ಯಾರು ಯಾವ ಸಮಯಕ್ಕೆ ಹೊರಬಂದರು. ಸಭೆಯ ಹಿಂದಿನ ಸಾಲಿನಲ್ಲಿದ್ದವರು ಯಾರು? ಯಾರು ಆಡಿಯೋ ಲೀಕ್ ಮಾಡಿದ್ರು ಅನ್ನೋ ಬಗ್ಗೆ ಕೆಲವರ ಹೆಸರುಗಳ ಪಟ್ಟಿ ಸಹ ರೆಡಿಯಾಗಿದೆ. ಇಂದು ಹೊಟೇಲ್ ಮ್ಯಾನೇಜರ ವಿಚಾರಣೆ ನಂತರ ತನಿಖೆ ಪೂರ್ಣಗೊಳಲಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *