ಗುರುಗ್ರಾಮದಲ್ಲಿ ಶಾಸಕರನ್ನು ಇಟ್ಟಿದ್ಯಾಕೆ? ಕೊನೆಗೂ ಉತ್ತರ ನೀಡಿದ ಬಿಎಸ್‍ವೈ

ಬೆಂಗಳೂರು: ಲೋಕಸಭಾ ಚುನಾವಣೆ ಚರ್ಚೆಯ ಉದ್ದೇಶದಿಂದ ಗುರುಗ್ರಾಮದ ರೆಸಾರ್ಟ್ ನಲ್ಲಿ ನಮ್ಮ ಶಾಸಕರು ಸೇರಿದ್ದಾರೆ ಅಂತ ಹೇಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ನಿಜವಾದ ಕಾರಣ ಬಿಚ್ಚಿಟ್ಟಿದ್ದಾರೆ.

ಸಿಎಲ್‍ಪಿ ಸಭೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯ ಐದು ಶಾಸಕರು ನಮ್ಮ ಬಳಿ ಇದ್ದಾರೆ ಅಂತ ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ನಮ್ಮ ಶಾಸಕರನ್ನು ದೆಹಲಿಗೆ ಕರೆಸಿಕೊಂಡು ಅಲ್ಲಿಂದ ಗುರುಗ್ರಾಮದ ರೆಸಾರ್ಟ್ ಗೆ ಕಳುಹಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿ.ಎಸ್.ಯಡಿಯೂರಪ್ಪ ಅವರು, ಒಂದು ವಾರದಿಂದ ಕಾಂಗ್ರೆಸ್‍ನವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. 3 ಗಂಟೆಗೆ ಆರಂಭವಾಗಬೇಕಿದ್ದ ಸಿಎಲ್‍ಪಿ ಸಭೆ 5 ಗಂಟೆಗೆ ಆರಂಭವಾಗಿದೆ. ಇದರಿಂದಾಗಿ ಅವರಲ್ಲಿಯೇ ಅಸಮಧಾನ ಹೊಗೆ ಆಡುತ್ತಿರುವುದು ಮತ್ತೊಮ್ಮೆ ಬಹಿರಂಗವಾಗಿದೆ ಎಂದು ಕಿಡಿಕಾರಿದರು.

ದೇಶದಲ್ಲಿ ಆಯರಾಂ ಗಯಾರಾಂ ಎನ್ನವುದನ್ನು ಹುಟ್ಟು ಹಾಕಿದವರು ಕಾಂಗ್ರೆಸ್‍ನವರು. ಸಿಎಲ್‍ಪಿ ಸಭೆಯಲ್ಲಿ ಕುಳಿತು ಶಾಸಕರಿಗೆ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ಇದರಿಂದಾಗಿ ನಾಯಕರು ಬಲವಂತದಿಂದ ಶಾಸಕರು ಸಭೆಗೆ ಹಾಜರಾಗಿದ್ದಾರೆ. ಈ ಮಧ್ಯೆಯೂ 4 ಜನ ಶಾಸಕರು ಗೈರು ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ಮಂತ್ರಿಗಳು ರಾಜ್ಯ ಪ್ರವಾಸ ಮಾಡುವುದನ್ನು ಬಿಟ್ಟು ಬಿಜೆಪಿ ವಿರುದ್ಧ ಟೀಕೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮೈತ್ರಿ ಸರ್ಕಾರವು ಇನ್ನು ಮುಂದೆಯಾದರೂ ಬರಗಾಲ ಬಗ್ಗೆ ಗಮನ ಕೊಡಬೇಕು. ಒಂದು ವೇಳೆ ನಿಷ್ಕಾಳಜಿ ಮುಂದುವರಿದರೆ ನಾವು ಸುಮ್ಮನಿರುವುದಿಲ್ಲ. ಬೀದಿಗಿಳಿದು ಸರ್ಕಾರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಗುಡುಗಿದರು.

ಬರ ವೀಕ್ಷಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ 20 ರಿಂದ 25 ಕ್ಷೇತ್ರ ಗೆಲ್ಲುವತ್ತ ನಮ್ಮ ಚಿತ್ತವಿದೆ. ಪಕ್ಷೇತರರ ಶಾಸಕರ ಬೆಂಬಲದಿಂದ ನಮ್ಮ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ನಾನು ಸಿಎಲ್‍ಪಿ ಸಭೆಯ ಬೆಳವಣಿಗೆ ಗಮನಿಸಿದ್ದೇನೆ. ನಿಮ್ಮ ಕಿತ್ತಾಟ ಏನೇ ಇರಲಿ. ರಾಜ್ಯದ ಅಭಿವೃದ್ಧಿಗೆ ಗಮನ ಕೊಡಿ ಎಂದು ಬಿ.ಎಸ್.ಯಡಿಯೂರಪ್ಪ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *