ದೇವೇಗೌಡರು, ಮೊಮ್ಮಕ್ಕಳು ಗೆಲ್ಲಲಿ ನೋಡೋಣ – ಬಿಎಸ್‍ವೈ ಸವಾಲು

ಚಾಮರಾಜನಗರ: ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಗೆಲುವು ಸಾಧಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ಮೊದಲಿಗೆ ದೇವೇಗೌಡರು ಮತ್ತು ಅವರ ಮೊಮ್ಮಕ್ಕಳು ಗೆದ್ದು ಬರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಕೊಳ್ಳೇಗಾಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ ಅವರು, ಮೊದಲು ದೇವೇಗೌಡರು ಮತ್ತು ಮೊಮ್ಮಕ್ಕಳು ಗೆದ್ದು ಬರಲಿ, ಬಳಿಕ ಬಿಜೆಪಿ ಬಗ್ಗೆ ಮಾತನಾಡಲಿ. ದೇವೇಗೌಡರು ಗೆಲ್ಲಲು ತುಂಬಾ ಕಷ್ಟಪಡುತ್ತಿದ್ದಾರೆ. ತುಮಕೂರಿನಲ್ಲಿ ಬಸವರಾಜು ಅವರು ಗೆಲ್ಲುವ ಸಾಧ್ಯತೆಗಳಿವೆ. ರಾಹುಲ್ ಗಾಂಧಿ ಮೂರ್ಖರು, ವಿಶ್ವಾಸ ದ್ರೋಹಿಗಳು, ನಂಬಿಕೆ ದ್ರೋಹಿಗಳ ನಾಯಕರಾಗಿದ್ದಾರೆ. ರಾಹುಲ್ ಗಾಂಧಿ ಅವರಂತೆ ಸಿಎಂ ಕುಮಾರಸ್ವಾಮಿ ಅವರು ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಬಿಎಸ್‍ವೈ ವಾಗ್ದಾಳಿ ನಡೆಸಿದರು.

ಪೊಲೀಸ್ ಅಧಿಕಾರಿಗಳ ಮೂಲಕ ಮಂಡ್ಯಕ್ಕೆ ಹಣ ರವಾನೆ ಮಾಡಲಾಗುತ್ತಿದೆ. ಜೆಡಿಎಸ್ ಪ್ರತಿಯೊಂದು ಬೂತ್ ಗೆ 5 ಲಕ್ಷದಂತೆ ಹಂಚಿಕೆ ಮಾಡುವ ಬಗ್ಗೆ ಮಾಹಿತಿ ಇದೆ. ಎಲ್ಲ ಮಾಧ್ಯಮಗಳಲ್ಲಿ ಬಂದಿದೆ. ಅಷ್ಟೇ ಅಲ್ಲದೇ 17 ನಿಮಿಷ ಆಡಿಯೋ ಕೂಡ ಇದೆ. ಈ ಬಗ್ಗೆ ತನಿಖೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾನು ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡುತ್ತೇನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುಮಲತಾ ಗೆಲವು ತಡೆಯಲು ಕುಮಾರಸ್ವಾಮಿ ಕುತಂತ್ರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಕುತಂತ್ರದ ಮೂಲಕ ಕುರ್ಚಿ ಉಳಿಸಿಕೊಳ್ಳಲು ಹೊರಟಿದ್ದಾರೆ. ಇದನ್ನು ತಡೆಯಬೇಕು, ಆಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಗೆ ಒಂದು ಗೌರವ ಬರುತ್ತದೆ. ಈಗಾಗಲೇ ಗುತ್ತಿಗೆದಾರರ ಮೂಲಕ ಮತದಾರರಿಗೆ ಹಣ ಹಂಚಿಕೆ ಮಾಡಲು ಸಂಚು ನಡೆಯುತ್ತಿದೆ ಎಂದು ಯಡಿಯೂರಪ್ಪ  ಆರೋಪ ಮಾಡಿದರು.

Comments

Leave a Reply

Your email address will not be published. Required fields are marked *