ಮಾವು ತುಂಬಿದ್ದ ಲಾರಿ ಪಲ್ಟಿ – ಮೂವರು ಮಹಿಳೆಯರು ಸೇರಿ 6ಮಂದಿ ದುರ್ಮರಣ

ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಮಾವು ತುಂಬಿದ್ದ ಲಾರಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಆರು ಮಂದಿ ಕೂಲಿಯಾಳುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಂಧ್ರದ ಗಡಿಯಲ್ಲಿ ಸಂಭವಿಸಿದೆ.

ಗಡಿ ಕುಪ್ಪಂ ಸಮೀಪದ ನಾಸೂರು ಬಳಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ನಾಸೂರು ಬಳಿ ಮಾವು ಕೀಳಲು ತಮಿಳುನಾಡಿನ ಕೊತ್ತಪೇಟೆ ಮೂಲದ 21 ಜನ ಕೂಲಿಯಾಳುಗಳು ಬಂದಿದ್ದರು. ಮಾವು ಕಿತ್ತು ಲಾರಿ ಮೂಲಕ ಕುಪ್ಪಂ ನಿಂದ ವಾಣಿಯಂಬಾಡಿ ಮಾರ್ಗವಾಗಿ ತೆರಳುತ್ತಿದ್ದರು.

ಈ ವೇಳೆ ನಾಸೂರು ಬಳಿ ಅತಿವೇಗ ಹಾಗೂ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಮೂರು ಮಂದಿ ಮಹಿಳೆಯರು ಹಾಗೂ 3 ಮಂದಿ ಪುರುಷರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಿಂದ 15 ಜನ ಪ್ರಾಣಾಪಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.

ಈ ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಕುಪ್ಪಂ ಪೊಲೀಸರು ಭೇಟಿ ನೀಡಿ, ಗಾಯಾಳುಗಳನ್ನು ಕೂಡಲೇ ತಮಿಳುನಾಡಿನ ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಸ್ಥಳದಲ್ಲಿ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸೀಮಾಂದ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಿತ್ತೂರು ಜಿಲ್ಲಾಧಿಕಾರಿ ಪ್ರದ್ಯುಮ್ನರಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದು, ಸರ್ಕಾರದಿಂದ ವೈದ್ಯಕೀಯ ನೆರವು ನೀಡಿದ್ದಾರೆ.

Comments

Leave a Reply

Your email address will not be published. Required fields are marked *