ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ- ಅತೃಪ್ತರು

– ಸಿದ್ದರಾಮಯ್ಯರ ಬೆದರಿಕೆಗಳಿಗೆ ಜಗ್ಗಲ್ಲ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಅತೃಪ್ತರಿಗೆ ಸೂಚನೆ ಕೊಟ್ಟ ಬೆನ್ನಲ್ಲೇ ನಾವು ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲ್ಲ ಎಂಬ ಖಡಕ್ ಮೆಸೇಜ್ ಪಾಸ್ ಮಾಡಿದ್ದಾರೆ.

ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ರಾಜೀನಾಮೆ ಹಿಂಪಡೆಯಲ್ಲ. ನಾವು ಈಗಲೂ ಪಕ್ಷದ ಜೊತೆಗಿದ್ದೇವೆ ಎಂದು ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ನಾವು ವೈಯಕ್ತಿಕವಾಗಿಯೇ ರಾಜೀನಾಮೆ ನೀಡಿದ್ದೇವೆ. ನಾವು ಸಿಎಲ್‍ಪಿ ಸಭೆಯನ್ನು ಟಿವಿ ಮುಖಾಂತರ ನೋಡಿದ್ದೇವೆ. ಸಭೆಯಲ್ಲಿ ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಏನೇ ಆದರೂ ನಾವು ವಾಪಸ್ ಪಡೆಯಲ್ಲ. ಅಲ್ಲದೆ ಇನ್ನೂ ಇಬ್ಬರು ಸಚಿವರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಅತೃಪ್ತ ಶಾಸಕ ಎಸ್ ಟಿ ಸೋಮಶೇಖರ್ ಖಡಕ್ಕಾಗಿ ನುಡಿದಿದ್ದಾರೆ.

ಕರ್ನಾಟಕ ಜನ ಮೈತ್ರಿ ಸರ್ಕಾರವನ್ನು ಒಪ್ಪುವುದಿಲ್ಲ ಎನ್ನುವುದು ಗೊತ್ತಾಗಿದೆ. ಇಲ್ಲಿ ಯಾವುದೇ ಕುದುರೆ ವ್ಯಾಪಾರ ನಡೆದಿಲ್ಲ. ಎಲ್ಲರೂ ಸ್ವ ಇಚ್ಚೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಬೆದರಿಕೆಗಳಿಗೆ ನಾವು ಬಗ್ಗಲ್ಲ. ನಾವು ಈಗಲೂ ಪಕ್ಷದಲ್ಲೇ ಇದ್ದೇವೆ. ಶಾಸಕ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ನಾವು ಬಿಜೆಪಿಗೆ ಹೋಗಲ್ಲ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೆಲ್ಲ ಸುಳ್ಳು ಎಂದು ಅತೃಪ್ತ ಶಾಸಕ ನಾರಾಯಣ ಗೌಡ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *