ರಾತ್ರೋರಾತ್ರಿ ಮನೆಗೆ ನುಗ್ಗಿ ಐಟಿ ದಾಳಿಗೊಳಗಾಗಿದ್ದ ರೈ ಆಪ್ತನ ಮೇಲೆ ಮಾರಣಾಂತಿಕ ಹಲ್ಲೆ!

ಮಂಗಳೂರು: ಕಾಂಗ್ರೆಸ್ ಮುಖಂಡನ ಮನೆಗೆ ನುಗ್ಗಿ ದುಷ್ಕರ್ಮಿಗಳು ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪ ಮೂಡ ಗ್ರಾಮದಲ್ಲಿ ನಡೆದಿದೆ.

ಸಚಿವ ರಮಾನಾಥ್ ರೈ ಆಪ್ತ, ಬಂಟ್ವಾಳ ತಾಲೂಕು ಪಂಚಾಯತ್ ನ ಸದಸ್ಯರಾಗಿರುವ ಸಂಜೀವ ಪೂಜಾರಿಯ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆದಿದೆ. ಸಂಜೀವ ಪೂಜಾರಿ ಮತ್ತು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮನೆಯ ಸಾಮಾಗ್ರಿಗಳು ಮತ್ತು ಕಾರನ್ನು ಧ್ವಂಸಗೊಳಿಸಿದ್ದಾರೆ.

ಈ ವೇಳೆ ತಡೆಯಲು ಬಂದ ಮೂವರ ಮೇಲೆಯೂ ಹಲ್ಲೆ ನಡೆಸಿದ್ದು, ಎಲ್ಲರನ್ನೂ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಾಗುತ್ತಿದ್ದಂತೆ ಪ್ರಕರಣ ರಾಜಕೀಯ ತಿರುವನ್ನು ಪಡೆದಿದ್ದು, ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಅಂತಾ ಆರೋಪಿಸಲಾಗಿದೆ.

ಕಾಂಗ್ರೆಸ್ ಮುಖಂಡ ಸಂಜೀವ ಪೂಜಾರಿ ಬಾರ್ ಹೊಂದಿದ್ದು, ಅಕ್ರಮ ಮದ್ಯ ಮಾರಾಟ ನಡೆಸಿದ್ದನ್ನು ಗುರುವಾರ ಸಂಜೆಯ ವೇಳೆಯಷ್ಟೇ ಬಿಜೆಪಿ ಕಾರ್ಯಕರ್ತರು ಪತ್ತೆ ಹಚ್ಚಿದ್ದರು.

Comments

Leave a Reply

Your email address will not be published. Required fields are marked *