ರಾಜಕೀಯ ಮಾಡ್ತೀಯಾ?, ರಾಜಕೀಯಾ ಬೇಕಾ?- ಮಾಜಿ ಕಾರ್ಪೋರೇಟರ್ ಮೇಲೆ ನಾಲ್ವರಿಂದ ಹಲ್ಲೆ!

ಬೆಂಗಳೂರು: ಮಾಜಿ ಕಾರ್ಪೋರೇಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಎಂಎಚ್ ಬಳಿ ನಡೆದಿದೆ.

ಮಾಜಿ ಕಾರ್ಪೋರೇಟರ್ ವೇದವ್ಯಾಸ್ ಭಟ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ವೇದವ್ಯಾಸ್ ಭಟ್ ಅವರು ವಾಕಿಂಗ್ ಹೋಗಿದ್ದ ಸಮಯದಲ್ಲಿ ಎರಡು ಬೈಕ್ ಗಳಲ್ಲಿ ನಾಲ್ವರು ದುಷ್ಕರ್ಮಿಗಳು ಬಂದಿದ್ದಾರೆ. ಅಲ್ಲದೇ ಆ ನಾಲ್ವರು ವೇದವ್ಯಾಸ್ ಭಟ್ ಮುಖಕ್ಕೆ ಹಲ್ಲೆ ನಡೆಸಿ ನಂತರ ಬೈಕಿನಲ್ಲಿ ಪರಾರಿಯಾಗಿದ್ದಾರೆ.

ಸದ್ಯಕ್ಕೆ ಮಾಜಿ ಕಾರ್ಪೋರೇಟರ್ ವೇದವ್ಯಾಸ್ ಭಟ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ವೇದವ್ಯಾಸ್ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ನಾಲ್ವರು ದುಷ್ಕರ್ಮಿಗಳು ಕೈಗಳಿಂದಲೇ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯ ಮಾಡುತ್ತೀಯಾ? ನಿನಗೆ ರಾಜಕೀಯ ಬೇಕಾ? ಅಂತ ಹೇಳಿ ಹಲ್ಲೆ ನಡೆಸಿದ್ದಾರೆ ಅಂತ ವೇದವ್ಯಾಸ್ ಭಟ್ ತಿಳಿಸಿದ್ದಾರೆ.

ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವೇದವ್ಯಾಸ್ ಭಟ್ ಈ ಹಿಂದೆ ಮಾವಳ್ಳಿಯ ಕಾರ್ಪೋರೇಟರ್ ಆಗಿದ್ದರು.

Comments

Leave a Reply

Your email address will not be published. Required fields are marked *