ಪುನೀತ್ ಅಗಲಿ ಇಂದಿಗೆ 3 ತಿಂಗಳು – ಅಪ್ಪು ನೆನಪಲ್ಲಿ ಅಶ್ವಿನಿಯಿಂದ 500 ಗಿಡಗಳ ದಾನ

ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಮೂರು ತಿಂಗಳುಗಳೇ ಕಳೆದು ಹೋಗಿದೆ. ಪ್ರೀತಿಯ ಅಪ್ಪು ನೆನಪಿಗಾಗಿ 500 ಗಿಡಗಳನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ದಾನ ಮಾಡಿದ್ದಾರೆ.

ಇಂದು ಕುಟುಂಬಸ್ಥರು ಸಮಾಧಿಗೆ ಭೇಟಿ ಕೊಟ್ಟು ತಿಂಗಳ ಪೂಜೆ ಮಾಡಿ ಅಪ್ಪುಗೆ ಎಡೆ ಇಟ್ಟಿದ್ದಾರೆ. ಸಿಹಿ ಖಾದ್ಯಗಳು ಹಾಗೂ ಅಪ್ಪುಗೆ ಇಷ್ಟದ ಪದಾರ್ಥಗಳನ್ನು ಮನೆಯಿಂದ ಮಾಡಿ ಸಮಾಧಿಗೆ ಎಡೆಯಿಟ್ಟಿದ್ದಾರೆ. ಬಳಿಕ ಪುನೀತ್ ರಾಜ್ ಕುಮರ್ ಅವರ ನೆನಪಿಗಾಗಿ ಅಶ್ವಿನಿ ಅವರು ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಗಿಡ ಸೇರಿ 500 ಗಿಡಗಳನ್ನು ಅಭಿಮಾನಿಗಳಿಗೆ ದಾನವಾಗಿ ನೀಡಿದ್ದಾರೆ. ಇದನ್ನೂ ಓದಿ: ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ – ಪುನೀತ್ ಖದರ್

ರಾಘಣ್ಣ, ಪುನೀತ್ ಸಹೋದರಿ ಲಕ್ಷ್ಮೀ, ಎಸ್.ಎ ಗೋವಿಂದ ರಾಜು, ಅಶ್ವಿನಿ ಪುನೀತ್ ರಾಜ್‍ಕುಮಾರ್, ಪುತ್ರಿಯರು ಹಾಗೂ ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು. ಕುಟುಂಬಸ್ಥರು ಪೂಜೆ ನೆರವೇರಿಸಿದ ಬಳಿಕ ಎಂದಿನಂತೆ ಅಭಿಮಾನಿಗಳಿಗೆ ದರ್ಶನ ವ್ಯವಸ್ಥೆ ಇದ್ದು, ಅನ್ನದಾನ ಕೂಡ ನಡೆಯಲಿದೆ.

ಅಪ್ಪು ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋದಲ್ಲಿ ಇಂದು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಅಪ್ಪುಗೆ ತಿಂಗಳ ಪೂಜೆ ಮಾಡಿದ್ದು, ದಿನಗಳು ಉರುಳುತ್ತಿದ್ದರೂ ಅಪ್ಪು ಮೇಲಿನ ಅಭಿಮಾನಿಗಳ ಪ್ರೀತಿ-ಭಕ್ತಿ ಕಿಂಚಿತ್ತೂ ಕಮ್ಮಿಯಾಗಿಲ್ಲ, ಇಂದಿಗೂ ಅಪ್ಪು ಸಮಾಧಿಗೆ ದೂರದ ಊರುಗಳಿಂದ ಅಭಿಮಾನಿಗಳು ಆಗಮಿಸುತ್ತಲೇ ಇದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಬಸ್ಸಿಗೆ ಶಿವಣ್ಣ ಡ್ರೈವರ್‌!

ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಸ್ತಂಭನದಿಂದ ಅಪ್ಪು ಇಹಲೋಕ ತ್ಯಜಸಿದ್ದರು. ಇಂದಿಗೆ 3 ತಿಂಗಳು ಕಳೆದರೂ ಕೂಡ ಅಭಿಮಾನಿಗಳು ಮಾತ್ರ ಅಪ್ಪು ನೆನೆಪಿನಲ್ಲೇ ಇದ್ದಾರೆ. ಗಣರಾಜ್ಯೋತ್ಸವದಂದು ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಪ್ರೇಕ್ಷಕರು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದು, ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *