ಹಣಕಾಸು ಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿಕೊಂಡ ಅರುಣ್ ಜೇಟ್ಲಿ

ನವದೆಹಲಿ: ಮೂತ್ರಪಿಂಡ ಸಮಸ್ಯೆಯಿಂದಾಗಿ ಕಳೆದ ಮೂರು ತಿಂಗಳುಗಳ ಕಾಲ ಸುದೀರ್ಘ ರಜೆಯಲ್ಲಿದ್ದ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಮ್ಮ ಅಧಿಕಾರವನ್ನು ಮತ್ತೊಮ್ಮೆ ಸ್ವೀಕರಿಸಿಕೊಂಡಿದ್ದಾರೆ.

ಕಳೆದ ಮೇ 14 ರಂದು ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ವೈದ್ಯರುಗಳ ಸಲಹೆ ಮೇರೆಗೆ ಸುದೀರ್ಘ ವಿಶ್ರಾಂತಿಯಲ್ಲಿದ್ದರು. ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದು ದೃಢಪಡಿಸಿದ ಬಳಿಕ ಪುನಃ ತಮ್ಮ ಅಧಿಕಾರಕ್ಕೆ ಮರಳಿದ್ದಾರೆ.

ಅರುಣ್ ಜೇಟ್ಲಿಯವರ ದೀರ್ಘ ರಜೆಯಿಂದಾಗಿ ಹಣಕಾಸು ಇಲಾಖೆಯನ್ನು ಕೇಂದ್ರ ರೈಲ್ವೇ ಹಾಗೂ ಕಲ್ಲಿದ್ದಲು ಸಚಿವ ಪಿಯೂಶ್ ಗೋಯಲ್ ಉಸ್ತುವಾರಿ ವಹಿಸಿಕೊಂಡಿದ್ದರು. ಈಗ ಅಧಿಕಾರಕ್ಕೆ ಮರಳಿರುವ ಅರುಣ್ ಜೇಟ್ಲಿಯವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‍ರವರ ನಿರ್ದೇಶನದಂತೆ ಹಣಕಾಸು ಖಾತೆ ಹಾಗೂ ಕಾರ್ಪೋರೇಟ್ ವ್ಯವಹಾರಗಳ ಖಾತೆಯ ಉಸ್ತುವಾರಿಯನ್ನು ನೀಡಲಾಗಿದೆ.

ರಾಷ್ಟ್ರಪತಿಯ ನಿರ್ದೇಶನದ ಮೇರೆಗೆ ಅರುಣ್ ಜೇಟ್ಲಿಯವರು ಗುರುವಾರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರ ಇಲಾಖೆಯ ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದಾರೆ.

ಅರುಣ್ ಜೇಟ್ಲಿಯವರು ತಮ್ಮ ದೀರ್ಘ ರಜೆಯ ನಡುವೆಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದರು. ಅಲ್ಲದೇ ಪ್ರಮುಖ ವಿಷಯಗಳಾದ ಅಸ್ಸಾಂನ ಎನ್‍ಸಿಆರ್(ರಾಷ್ಟ್ರೀಯ ನಾಗರೀಕ ನೋಂದಣಿ), ತುರ್ತು ಪರಿಸ್ಥಿತಿಗೆ 40 ವರ್ಷಗಳು, ಅವಿಶ್ವಾಸ ನಿರ್ಣಯ, ರಫೇಲ್ ಫೈಟರ್, ಜಿಎಸ್‍ಟಿ ಸೇರಿದಂತೆ ಇನ್ನು ಅನೇಕ ವಿಚಾರಗಳ ಬಗ್ಗೆ ಬರೆದುಕೊಂಡಿದ್ದರು.

ಕಳೆದ ನಾಲ್ಕು ತಿಂಗಳಲ್ಲಿ ಮೊದಲನೇ ಬಾರಿಗೆ ಆಗಸ್ಟ್ 6 ರಂದು ನಡೆದ ರಾಜ್ಯಸಭೆ ಉಪಸಭಾಪತಿ ಹುದ್ದೆಗೆ ನಡೆದ ಚುನಾವಣೆಗೆ ಭಾಗವಹಿಸುವ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *