ಉರಿಯಲ್ಲಿ ಉಗ್ರರ ದಾಳಿ – ಗದಗ ಜಿಲ್ಲೆಯ ಯೋಧ ಹುತಾತ್ಮ

ಗದಗ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗದಗ ಜಿಲ್ಲೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಜಿಲ್ಲೆಯ ರೋಣ ತಾಲೂಕಿನ ಕರುಮುಡಿ ಗ್ರಾಮದ 50 ವರ್ಷದ ಯೋಧ ವಿರೇಶ್ ಕುರತ್ತಿ ಹುತಾತ್ಮರಾಗಿದ್ದಾರೆ. ವಿರೇಶ್ ಕಳೆದ 30 ವರ್ಷದಿಂದ ಭಾರತೀಯ ಸೇನೆ 18ನೇ ಮರಾಠ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಸುಬೆದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಎರಡು ದಿನಗಳ ಹಿಂದೆ ಶ್ರೀನಗರದ ರಾಮಾಪೂರ ಹಾಗೂ ಉರಿ ಸೆಕ್ಟರ್ ನಲ್ಲಿ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಆ ದಾಳಿಯಲ್ಲಿ ಜಿಲ್ಲೆಯ ಯೋಧ ವಿರೇಶ್ ವೀರ ಮರಣ ಹೊಂದಿದ್ದಾರೆ. ಹುತಾತ್ಮ ಯೋಧನ ಪಾರ್ಥಿವ ಶರೀರ ಶುಕ್ರವಾರ ತಾಯಿನಾಡಿಗೆ ತಲುಪುವ ನಿರೀಕ್ಷೆ ಇದೆ. ಇದನ್ನೂ ಓದಿ: ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

ಸೇನೆಯಲ್ಲಿ ಸುಬೆದಾರ್ ಆಗಿ ಕೆಲಸ ಮಾಡುತ್ತಿದ್ದ ವಿರೇಶ್ ಕುರತ್ತಿ ನಿವೃತ್ತಿಯಾಗಲು ಕೇವಲ ಮೂರು ತಿಂಗಳು ಮಾತ್ರ ಬಾಕಿ ಇತ್ತು. ನಿವೃತ್ತಿಯಾಗುವ ಮೊದಲೇ ವಿರೇಶ್ ಹುತಾತ್ಮರಾಗಿದ್ದು, ಇದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಶುಕ್ರವಾರ ಯೋಧನ ಪಾರ್ಥಿವ ಶರೀರ ಶ್ರೀನಗರದಿಂದ ವಿಮಾನ ಮೂಲಕ ದೆಹಲಿ, ಪುಣೆ ಮಾರ್ಗವಾಗಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಲಿದೆ. ಅಲ್ಲಿಂದ ವಾಹನ ಮೂಲಕ ಗದಗ ಜಿಲ್ಲೆ ಕರುಮುಡಿ ಗ್ರಾಮಕ್ಕೆ ತಲುಪಲಿದೆ.

Comments

Leave a Reply

Your email address will not be published. Required fields are marked *