ಹರ್ಷ ಕೊಲೆ ಪ್ರಕರಣದ ಹಿಂದೆ ಅನೇಕ ಸಂಘಟನೆಗಳ ಕೈವಾಡ ಸಾಧ್ಯತೆ: ಆರಗ ಜ್ಞಾನೇಂದ್ರ

ಬೆಂಗಳೂರು: ಶಿವಮೊಗ್ಗದಲ್ಲಿ ಹರ್ಷನ ಕೊಲೆಯ ಹಿಂದೆ ಅನೇಕ ಸಂಘಟನೆಗಳ ಕೈವಾಡ ಇರುವ ಸಾಧ್ಯತೆ ಇದೆ. ಅಪರಾಧಿಗಳಿಗೆ ಯಾರ ಲಿಂಕ್ ಇದೆ. ಘಟನೆಯ ಹಿಂದೆ ಯಾರು ಇದ್ದಾರೆ ಎನ್ನುವುದರ ಕುರಿತು ತನಿಖೆ ಆಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಈಗ ಸಂಪೂರ್ಣವಾಗಿ ಶಾಂತವಾಗಿದೆ. ಇನ್ನಷ್ಟು ದಿನ ಪೊಲೀಸ್ ಭದ್ರತೆ ಇರುತ್ತದೆ. ಈಗಾಗಲೇ ಘಟನೆಗೆ ಸಂಬಂಧಿಸಿ 8 ಜನ ಬಂಧನ ಆಗಿದೆ. ಅವರ ಮೇಲೆ ಅನೇಕ ಕೇಸ್ ಇದೆ. ಈ ಕುರಿತು ತನಿಖೆ ನಡೆಯುತ್ತಿದೆ. 144 ಸೆಕ್ಷನ್ ಮುಂದುವರಿಸುತ್ತೇವೆ ಎಂದು ಹೇಳಿದರು.

ಅನೇಕ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಬಂದ ಕೂಡಲೇ ಪೊಲೀಸ್‍ಗೆ ದೂರು ಕೊಡಿ, ಭದ್ರತೆ ಕೊಡುತ್ತೇವೆ. ಪರಿಷತ್ ಸದಸ್ಯ ಅರುಣ್‍ಗೆ ಸೇರಿದಂತೆ ಎಲ್ಲರಿಗೂ ಭದ್ರತೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಆರೋಪಿಗಳು ಹರ್ಷನ ಮೇಲೆ 2016ರಿಂದಲೇ ಕಣ್ಣಿಟ್ಟಿದ್ದರು – ಹರ್ಷನ ಹತ್ಯೆಗೆ ಕಾರಣವೇನು?

ಕೋಟೆ ಮತ್ತೆ ದೊಡ್ಡ ಪೇಟೆ ಸ್ಟೇಷನ್ ವಿರುದ್ಧ ತನಿಖೆಯಾಗುತ್ತಿದೆ. 5 ವರ್ಷ ಸಂಪೂರ್ಣ ತನಿಖೆಗೆ ಸೂಚನೆ ನೀಡಲಾಗಿದೆ. ಕ್ರೈಂ ಆಡಿಟ್‍ಗೆ ಸೂಚನೆ ನೀಡಲಾಗಿದೆ. ಆರೋಪಿಗಳ ಮೇಲೆ ಅನೇಕ ಕೇಸ್ ಇದೆ. ಆದರೂ ಪೊಲೀಸರು ಏನು ಮಾಡಿದರೂ ಎಂದು ತನಿಖೆ ನಡೆಯುತ್ತಿದೆ. ಡಿಜಿಗೆ ತನಿಖೆ ಮಾಡುವಂತೆ ಪತ್ರ ಬರೆದಿದ್ದೇನೆ. ಪೊಲೀಸರು ಲೋಪ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿ, ಶಾಸಕರು ಹಾದಿಯಾಗಿ ಎಲ್ಲರೂ ಇದನ್ನು ಒತ್ತಾಯ ಮಾಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.  ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

ಶಿವಮೊಗ್ಗ ಘಟನೆಯಲ್ಲಿ ಕಲ್ಲು ತೂರಾಟದಿಂದ ಆದ ಹಾನಿ ಬಗ್ಗೆ ಲೆಕ್ಕ ಹಾಕಲಾಗುತ್ತಿದೆ. ನಾವು ಈ ಪ್ರಕರಣವನ್ನು ಸಾಮಾನ್ಯ ಪ್ರಕರಣ ಅಂತ ಅಂದುಕೊಂಡಿಲ್ಲ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವ ಸಂಪೂರ್ಣ ತನಿಖೆ ಆಗುತ್ತಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *