ಸಂಬಳ, ಊಟ ಕೊಡದೆ ದುಡಿಸಿಕೊಳ್ಳುವವರ ವಿರುದ್ಧ ಅನುಷ್ಕಾ ಬೇಸರ

ನವದೆಹಲಿ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ವಾರಂಟೈನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕಳ್ಳುತ್ತಿದ್ದಾರೆ. ಖುಷಿ ವಿಚಾರಗಳ ಜೊತೆಗೆ ಇದೀಗ ಒಂದು ಅಸಮಾಧಾನದ ಸಂಗತಿಯನ್ನು ಸಹ ಅನುಷ್ಕಾ ಹಂಚಿಕೊಂಡು, ಬೇಸರ ವ್ಯಕ್ತಪಡಿಸಿದ್ದಾರೆ.

ಕುಟುಂಬದೊಂದಿಗೆ ಸಮಯ ಕಳೆಯುವುದರ ಜೊತೆಗೆ ಅಭಿಮಾನಿಗಳನ್ನೂ ಮಾತನಾಡಿಸಲು ಅನುಷ್ಕಾ ಶರ್ಮಾ ಲೈವ್ ವಿಡಿಯೋ ಮಾಡಿದ್ದರು. ಈ ವೇಳೆ ತಮಗಾದ ಬೇಸರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಫೇಸ್ಬುಕ್‍ನಲ್ಲಿ ಈ ಕುರಿತು ಪೋಸ್ಟ್ ಸಹ ಹಾಕಿದ್ದಾರೆ.  ಲಾಕ್‍ಡೌನ್ ಸಮಯದಲ್ಲಿ ಆಹಾರವಿಲ್ಲದೆ ಬಳಲುತ್ತಿರುವವರ ಕಷ್ಟ ತಿಳಿದು ಅನುಷ್ಕಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ದಿನನಿತ್ಯ ವೈದ್ಯರು ಮತ್ತು ರೋಗಿಗಳು ಕಷ್ಟ ಪಡುತ್ತಿರುವುದನ್ನು ಕಂಡರೆ ಎಂತಹವರಿಗೂ ಬೇಸರವಾಗುತ್ತಿದೆ. ಕೊರೊನಾ ಸೋಂಕಿತರನ್ನು ತುಂಬಾ ಕೀಳಾಗಿ ನೋಡಲಾಗುತ್ತಿದೆ. ವೈದ್ಯರ ಸ್ಥಿತಿ ಕೂಡ ಕಷ್ಟಕರವಾಗಿದೆ. ಈ ಸುದ್ದಿಗಳನ್ನು ಕೇಳಿ ತುಂಬಾ ನೊಂದಿದ್ದೇನೆ. ಇಂತಹ ಸಂದರ್ಭದಲ್ಲಿ ನಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕಿದೆ. ಅಲ್ಲದೆ ಇದು ಎಲ್ಲರೂ ಒಟ್ಟಾಗಿರುವ ಸಮಯ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿ ಅನುಷ್ಕಾ ಶರ್ಮಾ ನಿಯಮಿತವಾಗಿ ಲೈವ್‍ಗೆ ಬರುತ್ತಿದ್ದು, ಅಭಿಮಾನಿಗಳ ಜೊತೆ ಮಾತನಾಡುತ್ತಾ, ಕೊರೊನಾ ವಿರುದ್ಧ ಹೋರಾಡುವ ಕುರಿತು ಸಲಹೆ ನೀಡುತ್ತಿದ್ದಾರೆ. ಅಲ್ಲದೆ ಎಚ್ಚರಿಕೆಯಿಂದ ಇರುವಂತೆ ಧೈರ್ಯ ತುಂಬುತ್ತಿದ್ದಾರೆ. ಕೆಲವೆಡೆ ಕಾರ್ಮಿಕರಿಗೆ ದಿನಗೂಲಿ ನೀಡದೆ, ಊಟ ಹಾಕದೆ ಹಿಂಸೆ ನೀಡುತ್ತಿರುವುದರ ಕುರಿತು ಅನುಷ್ಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ವಹಿಸುತ್ತಿದ್ದು, ಇದಕ್ಕೆ ಹಲವರು ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಸಿನಿ ತಾರೆಯರು ಹಾಗೂ ಧನಿಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಇನ್ನೂ ಹಲವರು ವೈದ್ಯ ವೃತ್ತಿ, ನರ್ಸ್ ವೃತ್ತಿ ಮಾಡುವ ಮೂಲಕ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಸಹ ಇತ್ತೀಚೆಗೆ ಪಿಎಂ ಕೇರ್ಸ್ ಫಂಡ್‍ಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Comments

Leave a Reply

Your email address will not be published. Required fields are marked *