ಚಾಮುಂಡಿ ದೇವಿಗೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಿದ ವಿಚಾರಕ್ಕೆ ಟ್ವಿಸ್ಟ್- ದೇವಿಗೆ ಉಡಿಸಿದ್ದು ಎರಡೆರಡು ಸೀರೆಗಳು!

ಮೈಸೂರು: ವಿಜಯದಶಮಿ ಹಬ್ಬದ ದಿನ ಚಿನ್ನದ ಅಂಬಾರಿಯಲ್ಲಿ ಕೂರಿಸಿದ್ದ ಚಾಮುಂಡಿ ದೇವಿಯ ಉತ್ಸವ ಮೂರ್ತಿಗೆ ಸಿಎಂ ಪತ್ನಿ ಕೊಟ್ಟಿದ್ದ ಸೀರೆ ಉಡಿಸಿದ ವಿಚಾರಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

ಅಂಬಾರಿ ಒಳಗೆ ಕೂರಿಸಿದ್ದ ಚಾಮುಂಡಿ ದೇವಿ ಉತ್ಸವ ಮೂರ್ತಿಗೆ ಉಡಿಸಿದ್ದು ಎರಡೆರಡು ಸೀರೆ ಎಂಬ ಅಂಶ ಈಗ ಸಾಕ್ಷಿ ಸಮೇತ ಬಹಿರಂಗವಾಗಿದೆ. ಈ ಮೂಲಕ ಉತ್ಸವ ಮೂರ್ತಿಗೆ ಉಡಿಸಿದ್ದ ಸೀರೆಯಲ್ಲೂ ದೊಡ್ಡ ರಾಜಕೀಯವೇ ನಡೆದಿರುವುದು ಬಹಿರಂಗವಾಗಿದೆ.

ವಿಜಯದಶಮಿ ದಿನ ಚಿನ್ನದ ಅಂಬಾರಿಯಲ್ಲಿ ಕೂರಿಸಿದ್ದ ಚಾಮುಂಡೇಶ್ವರಿಗೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಲಾಗಿತ್ತು. ಆದ್ರೆ ಅದಕ್ಕೂ ಮುನ್ನ ಮತ್ತೊಂದು ಸೀರೆ ಉಡಿಸಲಾಗಿತ್ತು. ಉತ್ಸವ ಮೂರ್ತಿಗೆ ಮೊದಲು ಉಡಿಸಿದ್ದು ಮೈಸೂರಿನ ಮೇಯರ್ ರವಿಕುಮಾರ್ ನೀಡಿದ್ದ ಸೀರೆ. ಆ ಸೀರೆ ಮೇಲೆ ಸಿಎಂ ಪತ್ನಿ ಕೊಟ್ಟಿದ್ದ ಸೀರೆಯನ್ನು ದೇವಸ್ಥಾನ ಮಂಡಳಿ ಉಡಿಸಿದೆ.

ಇಷ್ಟು ವರ್ಷ ಸೀರೆ ನೀಡುತ್ತಿದ್ದ ಬೆಂಗಳೂರಿನ ಬಳೇಪೇಟೆ ಭಕ್ತನನ್ನು ಮೇಯರ್ ರವಿಕುಮಾರ್ ಮನವೊಲಿಸಿ ಮೈಸೂರಿನ ಹಿತಕ್ಕಾಗಿ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಗ್ಯ ಸುಧಾರಿಸಲು ಉತ್ಸವ ಮೂರ್ತಿಗೆ ಸೀರೆ ಉಡಿಸಲು ಯಶಸ್ವಿಯಾಗಿದ್ದರು. ಮೇಯರ್ ಕೊಟ್ಟ ಸೀರೆ ಉಡಿಸಿ ಪೂಜೆ ಮಾಡಲಾಗಿತ್ತು. ಇದನ್ನು ನೋಡಿ ಮೇಯರ್ ಪೂಜೆ ಸಲ್ಲಿಸಿ ಚಾಮುಂಡಿ ಬೆಟ್ಟದಿಂದ ವಾಪಸ್ಸಾಗಿದ್ದರು. ನಂತರ ಕೆಲವೇ ಕ್ಷಣಗಳಲ್ಲಿ ಈ ಸೀರೆ ಮೇಲೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಲಾಗಿದೆ. ಈ ಮೂಲಕ ಸೀರೆ ಉಡಿಸುವ ವಿಚಾರದಲ್ಲಿ ರಾಜಕೀಯ ಒತ್ತಡ ತಂದಿರುವುದು ಸ್ಪಷ್ಟವಾಗಿದೆ.

Comments

Leave a Reply

Your email address will not be published. Required fields are marked *