ಮರಾಠಿಯಲ್ಲಿ ಮಾಹಿತಿ ನೀಡಲು ಸೂಚಿಸಿದ ಶಾಸಕಿ ಮೇಲೆ ಕನ್ನಡಿಗರ ಆಕ್ರೋಶ

ಬೆಳಗಾವಿ: ಮರಾಠಿ ಭಾಷೆಯಲ್ಲಿ ಮಾಹಿತಿ ನೀಡಲು ಸೂಚನೆ ನೀಡಿದ ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರದ ಉದ್ಘಾಟನೆ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಿ ಭಾಷೆಯಲ್ಲಿ ಮಾಹಿತಿ ನೀಡಲು ಸೂಚನೆ ನೀಡಿರುವ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೋ ಟ್ವೀಟ್‌ನಲ್ಲಿ ಶಾಸಕಿ ಖಾನಾಪುರ ತಾಲೂಕಿನಲ್ಲಿ ಕನ್ನಡ ಬಾರದ ಜನರಿಗೆ ಮರಾಠಿಯಲ್ಲಿ ಮಾಹಿತಿ ನೀಡಿ. ಕನ್ನಡ ಭಾಷೆಯ ನಾಮಫಲಕ ಜೊತೆ ಮರಾಠಿ ಭಾಷೆಯಲ್ಲೂ ನಾಮಫಲಕ ಅಳವಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ: ನಲಪಾಡ್ ಅಧಿಕಾರ ಸ್ವೀಕಾರ

ಖಾನಾಪುರ ತಾಲೂಕಿನಲ್ಲಿ ಮರಾಠಿ, ಕನ್ನಡ ಎರಡು ಭಾಷೆಯ ಜನರಿದ್ದಾರೆ. ಸಾಕಷ್ಟು ಜನರಿಗೆ ಕನ್ನಡ ಭಾಷೆ ಅರ್ಥ ಆಗಲ್ಲ. ಅವರು ಈಗ ಕನ್ನಡ ಅಭ್ಯಾಸ ಮಾಡುತ್ತಿದ್ದಾರೆ, ಕಲಿಯಲು ಸಹ ಮುಂದೆ ಬಂದಿದ್ದಾರೆ. ನಾವು ಜನ ಸೇವೆ ಮಾಡುತ್ತಿದ್ದು ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು. ಅದಕ್ಕೆ ಕನ್ನಡ ಭಾಷೆ ಜೊತೆ ಮರಾಠಿ ಭಾಷೆಗಳ ಫಲಕ ಹಾಕಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಕಾರ್ಯಕರ್ತರು ಸೇನಾನಿಗಳಂತೆ ಕೆಲಸ ಮಾಡಿದ್ದಾರೆ: ಕೋವಿಂದ್

ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ವೀಡಿಯೋ ಟ್ವೀಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಸಕಿಯನ್ನು ತರಾಟೆಗೆ ತೆಗೆದುಕೊಂಡಿರುವ ಕನ್ನಡಿಗರು ಕಳೆದ 60 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದು ಕನ್ನಡದಲ್ಲಿ ಕಲಿಯದೇ ಇರೋದು ಯಾರ ತಪ್ಪು ಎಂದು ಟೀಕಿಸಿದ್ದಾರೆ. ಮಹಾರಾಷ್ಟ್ರದ ಕನ್ನಡ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡದಲ್ಲಿ ಸೇವೆ ನೀಡುತ್ತಿದ್ದಾರಾ? ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ಮೇಲೆ ಯಾವ ರೀತಿ ದರ್ಪ ತೋರುತ್ತಿದ್ದಾರೆ ನಿಮಗೆ ಗೊತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *