ನಮ್ಮದು ಕುಟುಂಬ ರಾಜಕಾರಣ ಎನ್ನಲು ಯಾರಿಗೂ ಹಕ್ಕಿಲ್ಲ: ಅನಿತಾ ಕುಮಾರಸ್ವಾಮಿ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸ್ಪರ್ಧೆ ವಿಚಾರವಾಗಿ ಕುಟುಂಬ ರಾಜಕಾರಣ ಎಂದಿದ್ದ ವಿರೋಧಿ ಪಕ್ಷಗಳ ಟೀಕೆಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಮದ್ದೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಅವರ ಮಗ ರಾಜಕೀಯದಲ್ಲಿಲ್ವಾ? ಮಾಜಿ ಸಿಎಂ ಸಿದ್ದರಾಯಮ್ಯ ಪುತ್ರ ರಾಜಕೀಯದಲ್ಲಿಲ್ವಾ? ನಮ್ಮದು ಕುಟುಂಬ ರಾಜಕೀಯ ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ಟಾಂಗ್ ನೀಡಿದರು.

ನಾವು ಹಿಂಬಾಗಿಲಿನಿಂದ ಬಂದು ರಾಜಕೀಯ ಮಾಡುತ್ತಿಲ್ಲ. ಜನರ ಬಳಿ ತೆರಳಿ ಮತ ಹಾಕಿಸಿಕೊಂಡೇ ನಾವು ಕೂಡ ರಾಜಕೀಯ ಮಾಡುತ್ತಿದ್ದೇವೆ. ಹಾಗೊಂದು ವೇಳೆ ಇದನ್ನು ಟೀಕೆ ಮಾಡಿದರೆ ಅವರದ್ದು ವಿಕೃತ ಮನಸ್ಸು ಎಂದು ಹೇಳಬೇಕಾಗುತ್ತದೆ. ನಾವು ನಮ್ಮ ಕುಟುಂಬಸ್ಥರು ಬದ್ಧತೆಯನ್ನಿಟ್ಟಿಕೊಂಡು ರಾಜಕೀಯ ಮಾಡುತ್ತೇವೆ ಎಂದರು. ಇದನ್ನು ಓದಿ: ನಾನು ಮಗಳ ಬಗ್ಗೆ ಯೋಚನೆ ಮಾಡಿಲ್ಲ, ಕೆಲವರು ಮಕ್ಕಳು, ಮರಿಮಕ್ಕಳ ಬಗ್ಗೆ ಯೋಚಿಸುತ್ತಾರೆ: ಪ್ರತಾಪ್ ಸಿಂಹ

ಮಂಡ್ಯ ಕ್ಷೇತ್ರದಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಕೂಡ ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಚುನಾವಣೆ ಎಂದ ಮೇಲೆ ವಿರೋಧಿಗಳು ಇದ್ದೇ ಇರುತ್ತಾರೆ. ಇರಲೇಬೇಕಲ್ವಾ? ಎಂದು ಪ್ರಶ್ನಿಸಿ ಸುಮಲತಾ ಅವರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಲ್ಲದೇ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಿಂದಲೂ ನಿಖಿಲ್ ಮಂಡ್ಯದಲ್ಲಿ ಮನೆ ಖರೀದಿ ಮಾಡುವಂತೆ ಹೇಳುತ್ತಿದ್ದ. ಈಗ ನಿಖಿಲ್ ಮನೆ ಮಾಡುವ ವಿಚಾರ ಅವನು ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದರಿಂದ ಮನೆ ಮಾಡಬೇಕೆಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಾನು ಮೊದಲಿಂದಲೂ ಮಹಾನ್ ದೈವ ಭಕ್ತೆ ಆಗಿದ್ದು, ನಾನು ಪೂಜೆ ಸಲ್ಲಿಸಲು ದೇವಾಲಯಕ್ಕೆ ಬಂದಿದ್ದೇನೆ. ನನ್ನ ಪೂಜೆಗೂ ನಿಖಿಲ್ ಸ್ಪರ್ಧೆಗೂ ಸಂಬಂಧವಿಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *