ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ರೈತರ ಮೇಲೆ ಕೇಸ್ ಹಾಕಿದ ಆಂಧ್ರ ಅಧಿಕಾರಿಗಳು!

ಬಳ್ಳಾರಿ: ಕಾವೇರಿ ನೀರು ತಮಿಳುನಾಡು ಪಾಲಾಯ್ತು. ಇದೀಗ ತುಂಗಭದ್ರಾ ಜಲಾಶಯದ ನೀರು ಸದ್ದಿಲ್ಲದೇ ಆಂಧ್ರದ ಪಾಲಾಗುತ್ತಿದೆ. ಅಷ್ಟೇ ಅಲ್ಲ ರಾಜ್ಯದ ರೈತರ ಮೇಲೆ ಆಂಧ್ರದ ಅಧಿಕಾರಿಗಳು ದಬ್ಬಾಳಿಕೆ ಮಾಡಿ ರೈತರ ಮೇಲೆ ಕೇಸ್ ಹಾಕಿ ನೀರು ತೆಗೆದುಕೊಂಡಿದ್ದಾರೆ.

ಬಳ್ಳಾರಿ ತಾಲೂಕಿನ ಗೋನಾಳ ಮೋಕಾ ಭಾಗದ ರೈತರ ಮೇಲೆ ಟಿಬಿ ಬೋರ್ಡ್ ಅಧಿಕಾರಿಗಳು ದರ್ಪ ತೋರಿದ್ದಾರೆ . ಪಂಪ್‍ಸೆಟ್‍ಗಳನ್ನು ಕೊಡಲಿಯಿಂದ ಕಡಿದು ಹಾಕಿ ನಾಶಪಡಿಸಿದ್ದಾರೆ.

ವಿಪರ್ಯಾಸವೆಂದರೆ ಎಲ್‍ಎಲ್‍ಸಿ ಕಾಲುವೆಯಲ್ಲಿ ನಿಂತ ನೀರನ್ನೂ ಜಮೀನುಗಳಿಗೆ ಬಳಸಿಕೊಳ್ಳುವ ರೈತರ ಪಂಪ್‍ಸೆಟ್‍ಗಳನ್ನು ಟಿಬಿ ಬೋರ್ಡ್ ಅಧಿಕಾರಿಗಳು ಕೊಡಲಿಯಿಂದ ಕಡಿದು ಹಾಕಿ ನಾಶಪಡಿಸಿದ್ದಾರೆ. ಈ ವೇಳೆ ರೈತರು ಎಷ್ಟೇ ಬೇಡಿಕೊಂಡರೂ ರೈತರ ಮೇಲೆ ದಬ್ಬಾಳಿಕೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಪಂಪ್‍ಸೆಟ್‍ಗಳನ್ನು ಕಿತ್ತು ಹಾಕಿದ್ದಾರೆ.

ಅಷ್ಟೇ ಅಲ್ಲ ಟಿಬಿ ಬೋರ್ಡ್ ಅಧಿಕಾರಿಗಳು ಅಲ್ಲಿಯ ರೈತರ ಮೇಲೆ ಕೇಸ್ ಸಹ ದಾಖಲಿಸಿದ್ದಾರೆ. ಮೋಕಾ ಪೊಲೀಸ್ ಠಾಣೆಯಲ್ಲಿ 14 ರೈತರ ಮೇಲೆ ದೂರು ದಾಖಲಾಗಿದೆ. ಹೀಗಾಗಿ ನಮ್ಮ ನೀರೂ ನಮಗಿಲ್ವಾ? ನಿಂತ ನೀರನ್ನೂ ಬಳಸಿಕೊಳ್ಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಾ ಅಂತ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *