ಆನಂದ್‍ಸಿಂಗ್ ವಿರುದ್ಧ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆ

ಬೆಂಗಳೂರು: ನೂತನ ಅರಣ್ಯ ಸಚಿವರ ವಿರುದ್ಧ ದೊಡ್ಡ ಕೂಗು ಕೇಳಿತ್ತು. ಅರಣ್ಯ ನಾಶ ಮಾಡಿ ಜೈಲಿಗೆ ಹೋದವರಿಗೆ ಅರಣ್ಯ ಖಾತೆ ಕೊಟ್ಟಿದ್ದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಕುರಿತು ಸಾಕಷ್ಟು ಆಕ್ರೋಶ ಸಹ ವ್ಯಕ್ತವಾಗಿತ್ತು. ಇದೀಗ ಹೈಕೋರ್ಟಿನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆ ಮಾಡಲಾಗಿದೆ.

ಅರಣ್ಯ ಸಚಿವ ಆನಂದ್ ಸಿಂಗ್ ವಿರುದ್ಧ ಪ್ರಸ್ತುತ 16 ಪ್ರಕರಣಗಳು ಇದ್ದು ಲೋಕಾಯುಕ್ತ ಇಲಾಖೆ ದಾಖಲು ಮಾಡಿರುವ ಪ್ರಕರಣಗಳಿಗೆ ಹೈಕೋರ್ಟಿನಿಂದ ತಡೆಯಾಜ್ಞೆ ಮಾತ್ರ ಸಿಕ್ಕಿದೆ. ಆದರೆ ಇಡೀ ಪ್ರಕರಣವನ್ನು ಖುಲಾಸೆ ಮಾಡಿಲ್ಲ. ಅಲ್ಲದೆ ಸಿಬಿಐ ದಾಖಲು ಮಾಡಿದ ಪ್ರಕರಣದಲ್ಲಿ ಆನಂದ್ ಸಿಂಗ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಹೀಗಿರುವಾಗ ಸರ್ಕಾರ ಆನಂದ್‍ಸಿಂಗ್‍ಗೆ ಅರಣ್ಯ ಖಾತೆ ನೀಡಿರುವುದು ಸರಿಯಲ್ಲ ಎಂದು ವಕೀಲ ವಿಜಯ್‍ಕುಮಾರ್ ಪಿಐಎಲ್ ಸಲ್ಲಿಸಿದ್ದಾರೆ.

ಮೈನಿಂಗ್ ಮಾಡುತ್ತಿರುವುದನ್ನು ಸ್ವತಃ ಆನಂದ್ ಸಿಂಗ್ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಸಾಕ್ಷ್ಯಾಧಾರ ಇದ್ದರೂ, ಸರ್ಕಾರ ಆನಂದ್ ಸಿಂಗ್‍ಗೆ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂದು ವಕೀಲರು ಆರೋಪಿಸಿದ್ದಾರೆ.

ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಸೇರಿದಂತೆ ಹಲವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿ, ಮರ ಕಡಿದು ಮೈನಿಂಗ್ ಮಾಡುತ್ತಿರುವವರಿಗೆ ಅರಣ್ಯ ಖಾತೆ ನೀಡಲಾಗಿದೆ ಎಂದು ಕಿಡಿಕಾರಿದ್ದರು. ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈ ಕಮಾಂಡ್, ಈ ಕುರಿತು ವರದಿ ಸಲ್ಲಿಸುವಂತೆ ಸಹ ಕೇಳಿತ್ತು. ಈ ಎಲ್ಲದರ ಮಧ್ಯೆ ಇದೀಗ ಪಿಐಎಲ್ ಸಲ್ಲಿಕೆಯಾಗಿದೆ.

Comments

Leave a Reply

Your email address will not be published. Required fields are marked *