ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ, ಅಧಿಕಾರಕ್ಕೆ ಅಂಟಿ ಕುಳಿತ್ತಿಲ್ಲ: ಆನಂದ್ ಸಿಂಗ್

ಬೆಂಗಳೂರು: ಬಳ್ಳಾರಿ ಜಿಲ್ಲೆಯ ಹಿತಾಸಕ್ತಿಗಾಗಿ ನಾನು ರಾಜೀನಾಮೆ ಸಲ್ಲಿಕೆ ಮಾಡಿದ್ದು, ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಯಾವುದೇ ಕಾರಣಕ್ಕೂ ನಾನು ಅಧಿಕಾರಕ್ಕೆ ಅಂಟಿ ಕುಳಿತುಕೊಳ್ಳುವುದಿಲ್ಲ ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಅವರು, ಚುನಾವಣೆ ಬಳಿಕ ವಿಜಯನಗರವನ್ನ ಜಿಲ್ಲೆಯಾಗಿ ಘೋಷಣೆ ಮಾಡುವುದಾರೆ ನಾನು ಸಚಿವ ಸ್ಥಾನ ಬೇಡ ಎಂದು ಹೇಳಿದ್ದೆ. ಅಲ್ಲದೇ ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಯಾವುದೇ ಅಧಿಕಾರಕ್ಕೆ ನಾನು ಅಂಟಿ ಕೂತಿಲ್ಲ. ಜಿಲ್ಲೆಯ ಜನರ ಹಿತಾಸಕ್ತಿ ಕಾಪಾಡಲು ನನ್ನ ಬೇಡಿಕೆ ಮುಂದಿಟ್ಟು ರಾಜೀನಾಮೆ ನೀಡಿದ್ದೇನೆ ಎಂದರು.

ಇದೇ ವೇಳೆ ಆಪರೇಷನ್ ಕಮಲ ಬಗ್ಗೆ ಉತ್ತರಿಸಿ, ಎಲ್ಲಾ ಅಂಶಗಳು ಮಾಧ್ಯಮಗಳಿಗೆ ತಿಳಿಯುತ್ತದೆ. ಜಿಂದಾಲ್‍ಗೆ ಭೂಮಿ ಸೇಲ್ ಮಾಡಲು ನನ್ನ ವಿರೋಧ ಇದೆ. ಆದರೆ ನಾನು ಸರ್ಕಾರದ ವಿರೋಧವಾಗಿ ಇಲ್ಲ. ಜಿಲ್ಲೆಯ ಜನರ ಪರ ಇದ್ದೇನೆ. ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂಬ ಬೇಡಿಕೆ ವಿಚಾರವನ್ನು ನಾನು ಮುಂದಿಟ್ಟಿದ್ದೇನೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದರ ಮೇಲೆ ರಾಜೀನಾಮೆ ವಾಪಸ್ ಪಡೆಯುವ ಚಿಂತನೆ ನಡೆಸುತ್ತೇನೆ ಎಂದರು.

ಮೈತ್ರಿ ಸರ್ಕಾರದ ನಿರ್ಧಾರದಿಂದ ನನ್ನ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಭೂಮಿ ಪರಭಾರೆ ಕೊಟ್ಟರೆ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಅದರಂತೆ ರಾಜೀನಾಮೆ ನೀಡಿದ್ದೇನೆ. ಜಿಲ್ಲೆಯೇ ನನ್ನ ಆದ್ಯತೆ ಆಗಿದ್ದು, ನಾನು ಗುಂಪುಗಾರಿಕೆ ಮಾಡುತ್ತಿಲ್ಲ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆಯನ್ನ ನಾನು ನೀಡುವುದಿಲ್ಲ. ರಾಜೀನಾಮೆ ಕೊಟ್ಟಿಲ್ಲ ಎಂದು ಬಿಂಬಿಸಲಾಗುತ್ತಿದ್ದು, ಅದಕ್ಕೇ ರಾಜ್ಯಪಾಲರ ಭೇಟಿ ಮಾಡಿದ್ದೇನೆ ಎಂದರು.

ಬ್ಲಾಕ್ ಮೇಲ್ ಮಾಡ್ತಿಲ್ಲ: ಇದೇ ವೇಳೆ ರಾಜೀನಾಮೆ ನೀಡಿ ಬ್ಲಾಕ್ ಮೇಲ್ ಮಾಡುತ್ತಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿದ ಆನಂದ್ ಸಿಂಗ್, ಬ್ಲಾಕ್ ಮೇಲ್ ಪದ ಬಳಕೆ ಸರಿಯಲ್ಲ. ನಾನು ನನ್ನ ಬೇಡಿಕೆ ಇಟ್ಟಿದ್ದೇನೆ. ಬೇಡಿಕೆ ಈಡೇರಿಕೆಗೆ ರಾಜೀನಾಮೆ ಒಂದೇ ನನಗೆ ಮಾರ್ಗ ನನಗೆ ಕಂಡಿದ್ದು, ಅದರಂತೆ ಮುಂದುರಿದಿದ್ದೇನೆ. ಜಿಲ್ಲೆಯ ಎಲ್ಲಾ ಶಾಸಕರು ನನಗೆ ಪಕ್ಷಾತೀತವಾಗಿ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *