ಕೇರಳದಲ್ಲಿ RSS ಕಾರ್ಯಕರ್ತನ ಹತ್ಯೆ – ಪಿಎಫ್‌ಐ ಪದಾಧಿಕಾರಿ ಸೇರಿ ಮೂವರು ಅರೆಸ್ಟ್‌

ತಿರುವನಂತಪುರಂ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಪದಾಧಿಕಾರಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಸುಬೈರ್, ಸಲಾಂ ಮತ್ತು ಇಸಾಹಕ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೇರಳದ ಪಾಲಕ್ಕಾಡ್ ಜಿಲ್ಲೆಯವರು. ಮಂಬರಂನಲ್ಲಿ ನಡೆದ ಸಂಜಿತ್ ಹತ್ಯೆಯಲ್ಲಿ ಬಂಧಿತ ಪದಾಧಿಕಾರಿ ನೇರವಾಗಿ ಭಾಗಿಯಾಗಿದ್ದ ಎಂದು ಪಾಲಕ್ಕಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ವಿಶ್ವನಾಥ್ ತಿಳಿಸಿದ್ದಾರೆ.

ನವೆಂಬರ್ 15 ಬೆಳಗ್ಗೆ 9 ಗಂಟೆಗೆ ಆರ್‌ಎಸ್‌ಎಸ್‌ ಪ್ರಮುಖ್‌  ಸಂಜಿತ್ (27) ತನ್ನ ಪತ್ನಿಯನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಕೊಚ್ಚಿ ಕೊಲೆ ಮಾಡಲಾಗಿತ್ತು. ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಕಾರಿನಲ್ಲಿ ಹಿಂಬಾಲಿಸಿ ಸಂಜಿತ್‌ ಬೈಕಿಗೆ ಡಿಕ್ಕಿ ಹೊಡೆದಿದ್ದರು. ಬೈಕ್‌ನಿಂದ ಕೆಳಗೆ ಬಿದ್ದಾಗ ಪತ್ನಿಯ ಎದುರೇ ಸಂಜಿತ್‌ ಅವರನ್ನು ಕೊಚ್ಚಿ ಕೊಲೆ ಮಾಡಿದ್ದರು.

ಪಾಲಕ್ಕಾಡ್-ತ್ರಿಶ್ಯೂರ್ ರಾಷ್ಟ್ರೀಯ ಹೆದ್ದಾರಿ ಬಳಿಯ ಕಿನಾಸ್ಸೆರಿಯಲ್ಲಿ ಈ ಘಟನೆ ನಡೆದಿತ್ತು. ಸಂಜಿತ್ ದೇಹದ ಮೇಲೆ ಒಟ್ಟು 15 ಗಾಯಗಳಿದ್ದವು. ಕಾರಿನಲ್ಲಿ ಬಂದು ತನ್ನ ಪತಿಯನ್ನು ಹತ್ಯೆಗೈದವರನ್ನು ಗುರುತಿಸಬಹುದು ಎಂದು ಸಂಜಿತ್‌ ಪತ್ನಿ ಹೇಳಿದ್ದರು.

ಇಸ್ಲಾಮಿಕ್‌ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಕೊಲೆಯ ಹಿಂದೆ ಇದ್ದಾರೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಆರೋಪಿಸಿದ್ದವು. ಇದನ್ನೂ ಓದಿ: ನಟಿಯರು, ಮಹಿಳಾ ಜರ್ನಲಿಸ್ಟ್‌ಗಳಿಗೆ ಹೊಸ ಧಾರ್ಮಿಕ ಮಾರ್ಗಸೂಚಿ ಹೊರಡಿಸಿದ ತಾಲಿಬಾನ್‌

ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಹತ್ಯೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್‌ಐಎ) ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ಕೋವ್ಯಾಕ್ಸಿನ್‌ ಲಸಿಕೆಗೆ ಯುಕೆ ಅನುಮೋದನೆ- ಭಾರತದ ವಿದ್ಯಾರ್ಥಿಗಳು, ಪ್ರಯಾಣಿಕರು ನಿರಾಳ

ಕಳೆದ ಐದು ವರ್ಷಗಳಲ್ಲಿ ಕೇರಳದಲ್ಲಿ ಜಿಹಾದಿ ಗುಂಪುಗಳು 10 ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದೆ. ರಾಜ್ಯದಲ್ಲಿ ಇದುವರೆಗೆ ಸುಮಾರು 50 ಸಂಘಪರಿವಾರದ ಕಾರ್ಯಕರ್ತರು ಹತ್ಯೆಯಾಗಿದ್ದಾರೆ ಎಂದು ಎಂದು ಬಿಜೆಪಿ ಆರೋಪಿಸಿದೆ.

Comments

Leave a Reply

Your email address will not be published. Required fields are marked *