ಬೆಂಗಳೂರಿನಲ್ಲಿ ಗಲಭೆಗೆ ದೊಡ್ಡ ಸಂಚು – ಅಮೂಲ್ಯ ಮೂಲಕ ದಾಳ ಉದುರಿಸಿದ್ದ ಮಹಿಳೆ

– ಪಶ್ಚಿಮ ಬಂಗಾಳ ಮೂಲದ ಮಹಿಳೆಯ ಪ್ಲ್ಯಾನ್
– ತನಿಖೆಯ ವೇಳೆ ಸ್ಫೋಟಕ ವಿಚಾರ ಬಯಲು
– ವಿಚಾರಣೆಗೆ ಹಾಜರಾಗುವಂತೆ ಪೊಲೀಸರ ನೋಟಿಸ್

ಬೆಂಗಳೂರು: ಪಾಕಿಸ್ತಾನ ಜಿಂದಾಬಾದ್ ಎಂದಿದ್ದ ಅಮೂಲ್ಯಳ ವಿಚಾರಣೆ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಬಯಲಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಕೋಮು ಗಲಭೆ ನಡೆಸಲು ಅತಿ ದೊಡ್ಡ ಸಂಚು ರೂಪಿಸಿದ್ದ ವಿಚಾರ ಈಗ ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಮೂಲ್ಯ ಮೂಲಕ ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಲು ಪಶ್ಚಿಮ ಬಂಗಾಳ ಮೂಲದ ಮಹಿಳೆಯೊಬ್ಬಳು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಅಮೂಲ್ಯಳ ಜೊತೆ ನಿಕಟ ಸಂಪರ್ಕದಲ್ಲಿದ್ದ ಈಕೆ ಸಿಎಎ, ಎನ್‌ಆರ್‌ಸಿ ವಿರೋಧಿ ಕಾರ್ಯಕ್ರಮದಲ್ಲಿ ಯಾವ ರೀತಿ ಮಾತನಾಡಬೇಕು, ಯಾವ ವಿಚಾರವನ್ನು ಪ್ರಸ್ತಾಪ ಮಾಡಬೇಕು ಎನ್ನುವುದನ್ನು ತಿಳಿಸಿಕೊಡುತ್ತಿದ್ದಳು.

ನಿನ್ನ ಭಾಷಣಗಳು ಈಗಾಗಲೇ ಸಾಕಷ್ಟು ಜನರನ್ನು ತಲುಪಿದೆ. ಹೀಗೆ ಮಾತನಾಡಿದರೆ ನಿನ್ನ ಮಾತಿಗೆ ಬೆಲೆ ಸಿಗುತ್ತದೆ. ವಿಡಿಯೋಗಳ ಮೂಲಕ ನೀನು ಬಹಳ ಪ್ರಸಿದ್ಧ ಭಾಷಣಕಾರ್ತಿಯಾಗಬಹುದು ಎಂದು ಆ ಮಹಿಳೆ ಅಮೂಲ್ಯಳ ಬ್ರೇನ್ ವಾಶ್ ಮಾಡಿದ್ದಳು ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಈಕೆಯ ಜೊತೆ ಮತ್ತಷ್ಟು ಜನರಿದ್ದು ಈ ತಂಡಕ್ಕೆ ಅಮೂಲ್ಯ ಅಡ್ವೈಸರಿ ಕಮಿಟಿ(ಸಲಹಾ ಸಮಿತಿ) ಎಂದು ಹೆಸರನ್ನಿಟ್ಟಿದ್ದಳು. ಯಾವ ಊರಿಗೆ ಹೋದಾಗ ಏನು ಮಾತನಾಡಬೇಕು? ಏನು ಮಾತನಾಡಬಾರದು ಎನ್ನುವುದನ್ನು ಈ ಸಲಹಾ ಸಮಿತಿ ತಿಳಿಸುತ್ತಿತ್ತು.

 

ನಾನು ಆಡಿದ ಮಾತುಗಳು ಇಷ್ಟೊಂದು ಪರಿಣಾಮ ಬೀರುತ್ತದೆ ಎಂದು ಅಮೂಲ್ಯ ಸಹ ಭಾವಿಸಿರಲಿಲ್ಲ. ಆ ಮಹಿಳೆ ತನ್ನ ಆಪ್ತ ವ್ಯಕ್ತಿ ಎಂದೇ ಅಮೂಲ್ಯ ತಿಳಿದುಕೊಂಡಿದ್ದಳು. ಆದರೆ ಈಗ ಈಕೆಯ ಷಡ್ಯಂತ್ರ ಏನು ಎನ್ನುವುದು ಅಮೂಲ್ಯಗೆ ಗೊತ್ತಾಗಿದೆ.

ಮಹಿಳೆ ಅಮೂಲ್ಯ ಜೊತೆ ಮಾತನಾಡುವಾಗ ನಾನು ಹಿಂದೂ ಧರ್ಮದವಳು ಎಂದು ಪರಿಚಯಿಸಿಕೊಂಡಿದ್ದಳು. ಅಮೂಲ್ಯ ಹೇಳಿದ ಮಹಿಳೆ ಯಾರು? ಏನು ಮಾಡುತ್ತಿದ್ದಾಳೆ? ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ಆಕೆ ಹಿಂದೂ ಧರ್ಮದವಳು ಅಲ್ಲ ಎನ್ನುವು ವಿಚಾರ ಪೊಲೀಸರಿಗೆ ಗೊತ್ತಾಗಿದೆ.

ಅನ್ಯಧರ್ಮದ ಈ ಮಹಿಳೆ ಅಮೂಲ್ಯಳ ಮೂಲಕ ತನ್ನ ಕೆಲಸ ಮಾಡಲು ಪ್ಲ್ಯಾನ್ ಮಾಡಿದ್ದಳು. ಈ ಮಹಿಳೆ ಬೆಂಗಳೂರಿನಲ್ಲೇ ವಾಸವಾಗಿದ್ದು ಈಗ ಆಕೆಗೆ ಉಪ್ಪಾರ ಪೇಟೆ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

Comments

Leave a Reply

Your email address will not be published. Required fields are marked *