ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ-ಲೋಕಸಭೆಗೆ ಆಷಾಢದಲ್ಲೇ ಆಪರೇಷನ್ ಶುರು ಮಾಡ್ತಾರಾ ಅಮಿತ್ ಶಾ?

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಅಮಿತ್ ಶಾ ಅವರ ಎಂಟ್ರಿ ಕೊಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.

ಜುಲೈ 28ಕ್ಕೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದು, ಮೈತ್ರಿ ಸರ್ಕಾರದ ರಾಜಕಾರಣ ಕುರಿತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಮಿತ್ ಶಾರನ್ನು ಜೂನ್ 25 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಬಂದಿದ್ದರು. ಈ ವೇಳೆ ಯಡಿಯೂರಪ್ಪ ರಾಜ್ಯ ರಾಜಕಾರಣದ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು. ಅದೇ ದಿನ ಬೆಂಗಳೂರಿಗೆ ಬಂದು ಹೋಗಿ ಎಂದು ಅಮಿತ್ ಶಾರಿಗೆ ಆಹ್ವಾನವನ್ನು ನೀಡಿದ್ದರಂತೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮೈತ್ರಿ ಸರ್ಕಾರದ ರಾಜಕಾರಣದ ಬಗ್ಗೆ ಖುದ್ದು ರಾಜ್ಯ ನಾಯಕರ ಬಳಿ ಅಮಿತ್ ಶಾ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಎಲ್ಲ ವಿದ್ಯಮಾನಗಳ ಮಾಹಿತಿಯನ್ನು ಸಹ ಅಮಿತ್ ಶಾ ಪಡೆಯಲಿದ್ದಾರಂತೆ. ಎಲ್ಲ ಮಾಹಿತಿ ಪಡೆದ ಬಳಿಕ ಅಮಿತ್ ಶಾ ಲೋಕಸಭಾ ಚುನಾವಣೆಗೆ ಸಿದ್ಧತೆ ಹೇಗೆ ನಡೆಸಬೇಕು? ಆಭ್ಯರ್ಥಿಗಳ ಆಯ್ಕೆ? ಎಂಬ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಇತ್ತ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ರಚಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಹ ಲೋಕಸಭಾ ಚುನಾವಣೆಗಾಗಿ ಸಿದ್ಧತೆ ಆರಂಭಿಸಿದೆಯಂತೆ. ಆದ್ರೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‍ಗೆ ಯಾವ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕು ಎಂಬ ವಿಷಯದಲ್ಲಿ ಗೊಂದಲವಿದೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *