ಏರ್‍ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಏರ್ ಪೋರ್ಟ್ ನಿಂದ ಬಿಜೆಪಿ ಕಚೇರಿಗೆ ಆಗಮಿಸುವಾಗ ದಾರಿ ಮಧ್ಯೆ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಫ್ಲೆಕ್ಸ್ ಗಳಿಗೆ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದು, ಫ್ಲೆಕ್ಸ್ ರಾಜಕಾರಣದ ಮೂಲಕ ನನ್ನ ಮನವೊಲಿಸಲು ಸಾಧ್ಯವಿಲ್ಲ. ಫ್ಲೆಕ್ಸ್ ಹಾಕಿ ರಾಜಕಾರಣ ಮಾಡಿದ್ರೆ ನಮ್ ಹತ್ರ ಆಟ ನಡೆಯಲ್ಲ. ಕೆಲಸದಲ್ಲಿ ನಿಮ್ಮ ಶಕ್ತಿ ಪ್ರದರ್ಶನ ತೋರಿಸಿ. ಫ್ಲೆಕ್ಸ್ ಗೆ ಸುರಿದಿರುವ ಹಣವನ್ನ ದುರ್ಬಲರಿಗೆ ಸಹಾಯ ಮಾಡಿ, ನಿಮಗೂ ಹೆಸರು ಬರುತ್ತೆ, ಪಾರ್ಟಿಗೂ ಹೆಸರು ಬರುತ್ತೆ ಅಂತ ರಾಜ್ಯಾಧ್ಯಕ್ಷರ ಮೂಲಕ ರಾಜ್ಯದ ನಾಯಕರಿಗೆ  ಕ್ಲಾಸ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏರ್‍ಪೋರ್ಟ್ ರಸ್ತೆಯುದ್ದಕ್ಕೂ ಕಟೌಟ್, ಬ್ಯಾನರ್‍ಗಳ ಅಬ್ಬರ ಜೋರಾಗಿದ್ದು, ಏರ್‍ಪೋರ್ಟಿಂದ ನಗರದ ಬಿಜೆಪಿ ಕಚೇರಿವರೆಗೂ ಕಟೌಟ್‍ಗಳನ್ನ ಹಾಕಲಾಗಿದೆ. ಸ್ವಾಗತ ಕೋರುವ ಬ್ಯಾನರ್‍ಗಳಲ್ಲಿ ನಾಯಕರು ಮಿಂಚುತ್ತಿದ್ದಾರೆ.


ಅಮಿತ್ ಶಾ ರಾಜ್ಯಕ್ಕೆ ಆಗಮನದ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರ್ ರಾವ್, ಆಂಧ್ರ ಬಿಜೆಪಿ ನಾಯಕಿ ಪುರಂದರೇಶ್ವರಿ, ರಾಜ್ಯ ವಕ್ತಾರ ಸುರೇಶ್ ಕುಮಾರ್, ಯುವ ಘಟಕದ ಅಧ್ಯಕ್ಷ ಮುನಿರಾಜುಗೌಡ ಏರ್‍ಪೋರ್ಟ್‍ಗೆ ಆಗಮಿಸಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಅಮಿತ್ ಶಾ ಗೆ ಮೈಸೂರು ಪೇಟಾ, ಮೈಸೂರು ಶಲ್ಯ, ಮಲ್ಲಿಗೆ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದ್ರು. ಏರ್ ಪೋರ್ಟ್‍ನಲ್ಲಿ ಅಮಿತ್ ಶಾ ಪರ ಘೋಷಣೆ ಕೂಗಿ ಕಾರ್ಯಕರ್ತರು ಸ್ವಾಗತಿಸಿದ್ರು.

ಇದೇ ವೇಳೆ ಮಾತನಾಡಿದ ಸಿಟಿ ರವಿ, ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಮೂರು ದಿನ ನಿರಂತರ ಸಭೆ ನಡೆಸಲಿದ್ದಾರೆ. ಬಿಜೆಪಿ ಮಿಷನ್ 150 ಗೆ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ ಅಂದ್ರು.

Comments

Leave a Reply

Your email address will not be published. Required fields are marked *