ದೇಶವ್ಯಾಪಿ ಎನ್‌ಆರ್‌ಸಿ ಇಲ್ಲ, ಪ್ರಧಾನಿ ಹೇಳಿದ್ದು ಸರಿ: ಅಮಿತ್ ಶಾ

ನವದೆಹಲಿ: ದೇಶವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಸದ್ಯಕ್ಕಿಲ್ಲ. ಈ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಸರಿಯಿದೆ. ಸದ್ಯಕ್ಕೆ ದೇಶವ್ಯಾಪಿ ಎನ್‌ಆರ್‌ಸಿ ನಡೆಸುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆದಿಲ್ಲ ಎಂದು ಹೇಳಿದರು.

ಈ ವೇಳೆ ರಾಷ್ಟ್ರೀಯ ಜನಸಂಖ್ಯೆ ನೋಂದಣಿಗೂ(ಎನ್‍ಪಿಆರ್) ಎನ್‌ಆರ್‌ಸಿ ಗೂ ಯಾವುದೇ ಸಂಬಂಧವಿಲ್ಲ. ವಿರೋಧ ಪಕ್ಷಗಳು ಸುಳ್ಳು ಮಾಹಿತಿ ನೀಡಿ ಜನರಲ್ಲಿ ಹೆದರಿಕೆ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಎನ್‍ಪಿಆರ್ ನಿಂದ ಯಾರೂ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ. ಎನ್‌ಆರ್‌ಸಿ ಪ್ರಕ್ರಿಯೆ ಬೇರೆ, ಎನ್‍ಪಿಆರ್ ಬೇರೆ ಎಂದರು. ಇದನ್ನೂ ಓದಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಕ್ಯಾಬಿನೆಟ್ ಒಪ್ಪಿಗೆ – ಏನಿದು ಎನ್‍ಪಿಆರ್? ಏನು ದಾಖಲೆ ನೀಡಬೇಕು?

ಈ ವೇಳೆ ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರ ಎನ್‍ಪಿಆರ್ ಜಾರಿ ಮಾಡಲು ಬಿಡುವುದಿಲ್ಲ ಎಂಬ ನಿಲುವಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ರೀತಿಯ ಯಾವುದೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ರಾಜಕೀಯಕ್ಕಾಗಿ ಬಡವರ ಅಭಿವೃದ್ಧಿ ಅಡ್ಡಿಯಾಗಬೇಡಿ ಎಂದು ಅಮಿತ್ ಶಾ ಮನವಿ ಮಾಡಿಕೊಂಡರು.

ಭಾನುವಾರ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರವ್ಯಾಪಿ ಎನ್‌ಆರ್‌ಸಿ ಜಾರಿ ಮಾಡುವ ಬಗ್ಗೆ ನಾವು ಚರ್ಚೆ ಮಾಡಿಲ್ಲ. ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ. ಭಾರತದ ಮುಸ್ಲಿಮರ ಪೌರತ್ವದ ಹಕ್ಕು ಕಸಿಯುವುದಿಲ್ಲ ಎಂದು ಹೇಳಿದ್ದರು.

Comments

Leave a Reply

Your email address will not be published. Required fields are marked *