ಶೀಘ್ರವೇ ಜನಾರ್ದನ ರೆಡ್ಡಿಯ ಮನೆ ಮಾರಾಟಕ್ಕೆ!

ಬೆಂಗಳೂರು: ಆಂಬಿಡೆಂಟ್ ಪ್ರಕರಣದಲ್ಲಿ ವಂಚನೆ ಹಣ ವಸೂಲಿಗಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬೆಂಗಳೂರಿನ ನಿವಾಸ ಶೀಘ್ರವೇ ಮಾರಾಟವಾಗುವ ಸಾಧ್ಯತೆಯಿದೆ.

ಜನಾರ್ದನನ ರೆಡ್ಡಿ ಅವರ ಬೆಂಗಳೂರಿನ ಪಾರಿಜಾತ ಅಪಾರ್ಟ್‍ಮೆಂಟ್ ಮಾರಾಟಕ್ಕೆ ಎಲ್ಲ ರೀತಿಯ ಸಿದ್ಧತೆಗಳಾಗಿದೆ. ಈ ಸಂಬಂಧ ಜನಾರ್ದನ ರೆಡ್ಡಿ ಅವರಿಗೂ ನೋಟಿಸ್ ಕಳುಹಿಸಲಾಗಿದೆ. ಜೊತೆಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಸಾರ್ವಜನಿಕ ಮಾರಾಟದ ದಿನಾಂಕ ನಿಗದಿ ಮಾಡಲು ಸಿಸಿಬಿ ನಿರ್ಧರಿಸಿದೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

ಏನಿದು ಪ್ರಕರಣ?
ಆಂಬಿಟೆಂಟ್ ಕಂಪನಿ ವಂಚನೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿದವರ ಹಿತರಕ್ಷಣಾ ಕಾಯ್ದೆ(ಕೆಪಿಐಡಿ) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ವಂಚನೆ ಹಣವನ್ನು ಜನಾರ್ದನ ರೆಡ್ಡಿ ಅವರಿಂದ ಪಡೆಯಲು ಸಿಸಿಬಿ ಪಾರಿಜಾತ ಅಪಾರ್ಟ್‍ಮೆಂಟ್ ಮುಟ್ಟುಗೊಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಕೋರ್ಟ್ ಆಸ್ತಿ ಮುಟ್ಟುಗೋಲಿಗೆ ಒಪ್ಪಿಗೆ ಸೂಚಿಸಿತ್ತು.

ಕೋರ್ಟ್ ನಿಂದ ಅನುಮತಿ ಪಡೆದ ಸಿಸಿಬಿ ಪೊಲೀಸರು, ಮನೆಯ ಆಸ್ತಿ ಮೌಲ್ಯ ನಿರ್ಧಾರಕ್ಕೆ ಕಂದಾಯ ಇಲಾಖೆಯನ್ನು ಕೇಳಿಕೊಂಡಿತ್ತು. ಹೀಗಾಗಿ ಕಂದಾಯ ಇಲಾಖೆಯ ಸಲ್ಲಿಸಿದ್ದ ಮನವಿಗೆ ಸರ್ಕಾರವು ಇಂದು ಅನುಮತಿ ಕೊಟ್ಟಿದೆ. ಈ ಮೂಲಕ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಪೂರ್ಣವಾಗಿದ್ದು, ಮುಂದಿನ 15 ದಿನಗಳಲ್ಲಿ ಸಿಸಿಬಿ ಪೊಲೀಸರು ಮನೆ ಮಾರಾಟ ಮಾಡುವ ಸಾಧ್ಯತೆಯಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *