ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅಂಬಟಿ ರಾಯುಡು ನಿವೃತ್ತಿ

ನವದಹೆಲಿ: ಈ ಬಾರಿಯ ವಿಶ್ವಕಪ್‍ನಲ್ಲಿ ಅವಕಾಶ ವಂಚಿತ 33 ವರ್ಷದ ಭಾರತ ತಂಡದ ಬಲಗೈ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಅವರು ಅಂತರಾಷ್ಟ್ರೀಯ ಕ್ರಿಕೆಟ್‍ಗೂ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಈ ಹಿಂದೆ ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗದ ಬಗ್ಗೆ ಟ್ವಿಟ್ಟರ್ ನಲ್ಲಿ ಅಸಮಾಧಾನ ಹೊರ ಹಾಕಿದ್ದ ಅಂಬಟಿ ರಾಯುಡು ಈಗ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ವಿಶ್ವಕಪ್ ಆಯ್ಕೆ ವೇಳೆ ವಿಜಯ್ ಶಂಕರ್‍ ಗೆ  ತಂಡದಲ್ಲಿ ಸ್ಥಾನ ನೀಡಿರುವುದನ್ನು ಸಮರ್ಥಿಸಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್, ವಿಜಯ್ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ ಎಂದು ತಿಳಿಸಿದ್ದರು. ಈ ಕುರಿತು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದ ರಾಯುಡು, ಈ ಬಾರಿ ವಿಶ್ವಕಪ್ ಕ್ರಿಕೆಟ್ ನೋಡಲು 3ಡಿ ಕನ್ನಡಕ ಬುಕ್ ಮಾಡಿದ್ದಾಗಿ ಟ್ವೀಟ್ ಮಾಡಿದ್ದರು. ವಿಶ್ವಕಪ್ ಸ್ಥಾನ ಕಳೆದುಕೊಂಡ ಬೇಸರದಲ್ಲಿ ರಾಯುಡು ಈ ರೀತಿ ಮಾತನಾಡಿರಬಹುದು ಎನ್ನುವ ಮಾತು ಕೇಳಿ ಬಂದಿತ್ತು.

ಇದಾದ ನಂತರ ಟೂರ್ನಿಯ ಮಧ್ಯದಲ್ಲಿ ಶಿಖರ್ ಧವನ್ ಅವರು ಗಾಯದ ಸಮಸ್ಯೆ ಇಂದ ಹೊರಬಿದ್ದ ನಂತರ ಮತ್ತೆ ಅಂಬಾಟಿ ರಾಯುಡು ಅವರು ಆಯ್ಕೆ ಆಗುತ್ತಾರೆ ಎನ್ನಲಾಗಿತ್ತು ಆದರೆ ಅ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಯಿತು. ನಂತರ ರಾಯುಡು ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಅವರು ಕಾಲು ಬೆರಳಿನ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ಬಿದ್ದ ಬಳಿಕ ಅಚ್ಚರಿ ಬೆಳವಣಿಗೆಯಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಬಿಸಿಸಿಐ ಆಯ್ಕೆ ಸಮಿತಿಯ ಈ ನಿರ್ಧಾರದ ಬಳಿಕ ಇಂದು ಅಂಬಟಿ ರಾಯುಡು ಅವರ ರಾಜೀನಾಮೆ ನಿರ್ಧಾರ ಪ್ರಕಟವಾಗಿದೆ.

2013 ರ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿರುವ ರಾಯಡು 55 ಏಕದಿನ ಪಂದ್ಯಗಳ 50 ಇನ್ನಿಂಗ್ಸ್ ನಲ್ಲಿ 47.05ರ ಸರಾಸರಿಯಲ್ಲಿ ಮೂರು ಶತಕ ಮತ್ತು ಹತ್ತು ಅರ್ಧಶತಕ ಸಿಡಿಸಿ ಒಟ್ಟು 1,694 ರನ್ ಹೊಡೆದಿದ್ದಾರೆ. ಭಾರತದ ಪರ ಆರು ಟಿ20 ಪಂದ್ಯಗಳನ್ನು ಆಡಿರುವ ರಾಯುಡು ಕೇವಲ 42 ರನ್ ಬಾರಿಸಿದ್ದು,  ಟೆಸ್ಟ್ ತಂಡಕ್ಕೆ ಆಯ್ಕೆ ಆಗಿರಲಿಲ್ಲ.

Comments

Leave a Reply

Your email address will not be published. Required fields are marked *