ಕಾವೇರಮ್ಮನ ಮಡಿಲಿಗೆ ಅಂಬಿ – ಶ್ರೀರಂಗಪಟ್ಟಣದ ಸಂಗಮದಲ್ಲಿ ಅಭಿಯಿಂದ ಅಸ್ಥಿ ವಿಸರ್ಜನೆ

– ದರ್ಶನ್, ರಾಕ್‍ಲೈನ್, ದೊಡ್ಡಣ್ಣ ಸೇರಿ ಹಲವರು ಭಾಗಿ

ಮಂಡ್ಯ: ಮಂಡ್ಯದ ಗಂಡು ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಮೂರು ಮಡಿಕೆಗಳಲ್ಲಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಪುತ್ರ ಅಭಿಷೇಕ್ ವಿಸರ್ಜನೆ ಮಾಡಿದರು.

ಒಟ್ಟು ಆರು ಮಡಿಕೆಗಳಲ್ಲಿ ಅಂಬರೀಶ್ ಅಸ್ಥಿಯನ್ನ ಸಂಚಯನ ಮಾಡಲಾಗಿದೆ. ಇದರಲ್ಲಿ ಮೂರು ಮಡಿಕೆಗಳಲ್ಲಿರುವ ಅಸ್ಥಿಯನ್ನ ಶ್ರೀರಂಗಪಟ್ಟಣದ ಸಂಗಮದಲ್ಲಿ ವಿಸರ್ಜನೆ ಮಾಡಲಾಗಿದೆ. ಇನ್ನೊಂದು ಮಡಿಕೆಯಲ್ಲಿರುವ ಅಸ್ಥಿಯನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಇಡಲಾಗುತ್ತದೆ. ಮತ್ತೊಂದು ಮಡಿಕೆಯಲ್ಲಿರುವ ಅಸ್ಥಿಯನ್ನು ನಿರ್ಮಾಪಕರ ಸಂಘದ ಕಚೇರಿಯಲ್ಲಿ ಇಡಲಾಗುತ್ತದೆ. ಮಗದೊಂದು ಮಡಿಕೆಯಲ್ಲಿರುವ ಅಸ್ಥಿಯನ್ನು ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ.

ಇದಕ್ಕೂ ಮೊದಲು ಶನಿವಾರ ಕರುನಾಡನ್ನೇ ಅಗಲಿದ ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಶ್ ಸಮಾಧಿಯಲ್ಲಿ ಅಸ್ಥಿ ಸಂಚಯನ ನಡೆಯಿತು. ಪುತ್ರ ಅಭಿಷೇಕ್, ಪತ್ನಿ ಸುಮಲತಾ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಅಂಬಿ ಆಪ್ತರಾದ ಶ್ರೀನಿವಾಸ್, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟ ದೊಡ್ಡಣ್ಣ, ಶಾಸಕ ಮುನಿರತ್ನ, ಸಾರಾ ಗೋವಿಂದು ಸೇರಿದಂತೆ ಹಲವಾರು ಭಾಗಿಯಾಗಿದ್ದರು.

ರೆಬೆಲ್ ಸ್ಟಾರ್ ಗೆ ತಾವು ಬದುಕಲ್ಲ ಅನ್ನೋ ಸುಳಿವು ಮೊದಲೇ ಸಿಕ್ಕಿತ್ತಾ..? ಎಂಬ ಪ್ರಶ್ನೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ನಾಲ್ಕು ತಿಂಗಳ ಹಿಂದೆಯಷ್ಟೇ ಅಂಬರೀಶ್ ಮಗನ ಹೆಸರಿಗೆ ತಮ್ಮ ಆಸ್ತಿಯನ್ನು ವರ್ಗಾಯಿಸಿದ್ದರು. ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿದ್ದ 7 ಎಕರೆಯಷ್ಟು ಪ್ರಿತಾರ್ಜಿತ ಆಸ್ತಿಯನ್ನು ಮಗನ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಮದ್ದೂರು ಪಟ್ಟಣದಲ್ಲಿರುವ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಪುತ್ರ ಅಭಿಷೇಕ್ ಜೊತೆಗೆ ಆಗಮಿಸಿ ಆಸ್ತಿ ವರ್ಗಾವಣೆ ಮಾಡಿದ್ದರು.

https://www.youtube.com/watch?v=IkWFM7AVeI4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *