ಅಮರ ಜವಾನ್ ಜ್ಯೋತಿ ವಿಲೀನ – ಹುತಾತ್ಮರಿಗೆ ಮಾಡಿದ ಅಗೌರವ: ಬಿಕೆ ಹರಿಪ್ರಸಾದ್

ಬೆಂಗಳೂರು: 1971ರ ಯುದ್ದದಲ್ಲಿ ಹುತಾತ್ಮರಾದ ಯೋಧರ ನೆನಪಿಗೆ ಇಂಡಿಯಾ ಗೇಟ್‌ನಲ್ಲಿ ಹಚ್ಚಲಾದ ಅಮರ ಜವಾನ್ ಜ್ಯೋತಿಯನ್ನು ವಿಲೀನಗೊಳಿಸಿರುವುದು ಹುತಾತ್ಮರಿಗೆ ಮಾಡಿದ ಅಗೌರವ ಎಂದು ಮಾಜಿ ಸಂಸದ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಳೆದ 50 ವರ್ಷಗಳಿಂದ ಈ ಜ್ಯೋತಿ ನಮ್ಮ ದೇಶಕ್ಕಾಗಿ ಹುತಾತ್ಮರಾದ ಯೋಧರ ಸ್ಮರಣೆಯ ಪ್ರತೀಕವಾಗಿತ್ತು. ಅಮರ ಜವಾನ್ ಶಾಶ್ವತ ಜ್ಯೋತಿ ನಮ್ಮ ದೇಶಭಕ್ತಿಯ ಹಾಗೂ ದೇಶಪ್ರೇಮದ ಸಂಕೇತವಾಗಿ ಪ್ರಜ್ವಲಿಸುತ್ತಿತ್ತು. ಎರಡೂ ಜ್ಯೋತಿಗಳ ನಿರ್ವಹಣೆ ಕಷ್ಟ ಎನ್ನುವ ಹಿನ್ನೆಲೆಯಲ್ಲಿ ಯುದ್ಧ ಸ್ಮಾರಕದಲ್ಲಿ ನಿರ್ಮಿಸಲಾಗಿರುವ ಜ್ಯೋತಿಯಲ್ಲಿ ವಿಲೀನಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: 50 ವರ್ಷಗಳಿಂದ ಬೆಳಗುತ್ತಿದ್ದ ಅಮರ್‌ ಜವಾನ್‌ ಜ್ಯೋತಿ ಇನ್ಮುಂದೆ ಇಂಡಿಯಾ ಗೇಟ್‌ನಲ್ಲಿ ಬೆಳಗಲ್ಲ!

1971ರಲ್ಲಿ ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಮರ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್‌ನಲ್ಲಿ ಇರಿಸಲಾಗಿತ್ತು. ಆನಂತರ ಹಲವಾರು ಯುದ್ಧಗಳಲ್ಲಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ನೀಡಿದ ಹಲವಾರು ಧೀರ ಯೋಧರ ನೆನಪೂ ಕೂಡಾ ಇದರಲ್ಲೇ ಸಮ್ಮಿಳಿತವಾಗಿತ್ತು ಎಂದರು. ಇದನ್ನೂ ಓದಿ: ಇಂಡಿಯಾ ಗೇಟ್‍ನಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಭವ್ಯ ಪ್ರತಿಮೆ ಅನಾವರಣ: ಮೋದಿ

ಈಗ ಮೋದಿ ನೇತೃತ್ವದ ಸರ್ಕಾರ ಇದನ್ನು ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳುವ ಮೂಲಕ ಹುತಾತ್ಮರಿಗೆ ಅವಮಾನ ಮಾಡಿದೆ. ಇಂತಹ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನಮ್ಮ ಇತಿಹಾಸವನ್ನು ತಿರುಚುವಂತಹ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *