ರಾಜ್ಯದಲ್ಲಿ ಹಲವೆಡೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಹಲವೆಡೆ ಮಂಗಳವಾರ ಸಂಜೆ ವರುಣ ತಂಪೆರೆದಿದ್ದಾನೆ. ಮಡಿಕೇರಿ, ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ  ಮಳೆಯಾಗಿದೆ.

ಪ್ರವಾಸಿಗರ ಹಾಟ್ ಸ್ಪಾಟ್, ಮಂಜಿನ ನಗರಿ ಪ್ರವಾಸಿಗರ ಸ್ವರ್ಗ ಎಂದೆಲ್ಲಾ ಕರೆಯುವ ಕೊಡಗಿಗೆ ವರುಣ ಎಂಟ್ರಿ ಕೊಟ್ಟಿದ್ದನು. ಹಾಟ್ ಸ್ಪಾಟ್ ಆಗಿದ್ದ ಕೊಡಗಿನ ಇಳೆಗೆ ಮಳೆರಾಯ ತಂಪೆರೆದಿದ್ದಾನೆ. ಇಷ್ಟು ದಿನ ಬಿಸಿಲ ಬೇಗೆಯಿಂದ ಜಿಲ್ಲೆಯ ಜನ ಬೇಸತ್ತು ಹೋಗಿದ್ದು, ಮಳೆಯ ಆಗಮನದಿಂದ ಜನ ಸಂತಸಗೊಂಡಿದ್ದಾರೆ.

ಮಂಗಳವಾರ ಸಂಜೆ ವೇಳೆಗೆ ಕೊಡಗಿನ ವಿವಿಧ ಭಾಗದಲ್ಲಿ ಗುಡುಗು, ಅಲ್ಲಿಕಲು ಸಹಿತ ಮಳೆಯಾಗಿದೆ. ಒಂದೆಡೆ ಬೇಸತ್ತ ಕೊಡಗಿನ ಜನತೆ ಕೊಂಚ ನಿಟ್ಟುಸಿರು ಬಿಟ್ಟರೆ, ಇನ್ನೊಂದೆಡೆ ಭಾರೀ ಗುಡುಗಿನ ಸದ್ದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಇತ್ತ ಚಿಕ್ಕಮಗಳೂರಿನಲೂ ಭರ್ಜರಿ ಮಳೆ ಆಗಿದೆ. ಚಿಕ್ಕಮಗಳೂರು ನಗರ ಸೇರಿ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಭಯಂಕರ ಗುಡುಗು-ಸಿಡಿಲಿನೊಂದಿಗೆ ವರುಣ ತನ್ನ ಅಬ್ಬರವನ್ನು ತೋರಿದ್ದಾನೆ. ಚಿಕ್ಕಮಗಳೂರಿನಲ್ಲಿ ಅರ್ಧ ಗಂಟೆಗಳ ಕಾಲ ವರುಣ ಧಾರಾಕಾರವಾಗಿ ಸುರಿದಿದ್ದಾನೆ. ಮಳೆ ಕಂಡು ರೈತ ಸಮುದಾಯದಲ್ಲಿ ಸಂತಸ ವ್ಯಕ್ತವಾಗಿದೆ.

ಮಂಗಳೂರು ನಗರದಲ್ಲಿ ಕೂಡ ಸಂಜೆ 5 ಗಂಟೆ ವೇಳೆಗೆ ಧೂಳು ಮಿಶ್ರಿತ ಪ್ರಬಲ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿತ್ತು. ಕಳೆದ ಕೆಲ ದಿನಗಳಿಂದ ಬಿಸಿಲಿನ ಧಗೆಯಲ್ಲಿದ್ದ ಕರಾವಳಿಯಲ್ಲಿ ಮಂಗಳವಾರ ಸುರಿದ ಮಳೆಯಿಂದ ವಾತಾವರಣ ತಂಪಾಗಿದೆ.

ಕೆಲವೆಡೆ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಮರಗಳು ಧಾರಾಶಾಹಿಯಾಗಿವೆ. ಅಲ್ಲದೆ ತೆಂಗಿನ ಮರಗಳು ಮನೆ ಮೇಲೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ಭಾರೀ ಗಾತ್ರದ ಮರಗಳು ನೆಲಕ್ಕುರುಳಿದ್ದರಿಂದ ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಕೆಲಕಾಲ ಅಡ್ಡಿಯುಂಟಾದ ಘಟನೆಯೂ ನಡೆದಿದೆ.

Comments

Leave a Reply

Your email address will not be published. Required fields are marked *