ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಅಕ್ಷಯ್ ಒಂದೂವರೆ ಕೋಟಿ ರೂ. ದಾನ

ಚೆನ್ನೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ. ಈ ಬಗ್ಗೆ ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಕ್ಷಯ್ ಕುಮಾರ್ ತಮ್ಮ ಮಂಬರುವ ‘ಲಕ್ಷ್ಮಿ ಬಾಂಬ್’ ಚಿತ್ರದಲ್ಲಿ ಮಂಗಳಮುಖಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ರಾಘವ ಲಾರೆನ್ಸ್ ನಿರ್ದೇಶನ ಮಾಡುತ್ತಿದ್ದಾರೆ. ರಾಘವ ಅವರು ಅಕ್ಷಯ್ ಕುಮಾರ್ ಅವರ ಬಳಿ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಮಂಗಳಮುಖಿಯರ ಜೀವನವನ್ನು ಬದಲಿಸಲು ಒಂದು ಹೊಸ ಹೆಜ್ಜೆ ಇಡುತ್ತಿದ್ದೇವೆ ಎಂದರು. ಇದನ್ನು ಕೇಳಿದ ಅಕ್ಷಯ್, ರಾಘವ್ ಅವರಿಗೆ ಧನ್ಯವಾದ ತಿಳಿಸಿ ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?
ನಾನು ಸಿಹಿ ಸುದ್ದಿ ಹಂಚಿಕೊಳ್ಳಲು ಬಯಸುತ್ತೇನೆ. ಮಂಗಳಮುಖಿಯರಿಗಾಗಿ ಭಾರತದಲ್ಲಿ ಮೊದಲ ಬಾರಿಗೆ ಮನೆಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಅಕ್ಷಯ್ ಕುಮಾರ್ ಅವರು ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಎಜುಕೇಶನ್‍ನಲ್ಲಿ ಮಕ್ಕಳಿಗಾಗಿ ಮನೆ, ವೈದ್ಯಕೀಯ ಹಾಗೂ ಅಂಗವಿಕಲ ಡ್ಯಾನ್ಸರ್ಸ್‍ ಗೆ ವಿಭಿನ್ನ ಯೋಜನೆಗಳೊಂದಿಗೆ ತೊಡಗಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಈ ಟ್ರಸ್ಟ್‌ಗೆ 15 ವರ್ಷಗಳಾಗಿದ್ದು, ಇದನ್ನು ಸಂಭ್ರಮಿಸಲು ಮಂಗಳಮುಖಿಯರಿಗಾಗಿ ಮನೆ ಕಟ್ಟಿಸಲು ಹಣವನ್ನು ಸಂಗ್ರಹಿಸುತ್ತಿದ್ದೇವೆ.

‘ಲಕ್ಷ್ಮಿ ಬಾಂಬ್’ ಚಿತ್ರದ ಶೂಟಿಂಗ್ ವೇಳೆ ಅಕ್ಷಯ್ ಅವರ ಬಳಿ ತನ್ನ ಟ್ರಸ್ಟ್ ಹಾಗೂ ಮಂಗಳಮುಖಿಯರಿಗಾಗಿ ಮನೆ ನಿರ್ಮಿಸುತ್ತಿರುವ ವಿಷಯವನ್ನು ತಿಳಿಸಿದೆ. ಇದನ್ನು ಕೇಳಿದ ತಕ್ಷಣ ಅಕ್ಷಯ್ ಅವರು ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ. ದೇವರಂತೆ ಸಹಾಯ ಮಾಡುವುದನ್ನು ನಾನು ಪರಿಗಣಿಸುತ್ತೇನೆ. ಈಗ ಅಕ್ಷಯ್ ಅವರು ನಮಗೆ ದೇವರಂತೆ. ಅವರ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಎಲ್ಲಾ ಮಂಗಳಮುಖಿಯರ ಪರವಾಗಿ ನಾನು ಅಕ್ಷಯ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅತಿ ಶೀಘ್ರದಲ್ಲೇ ಭೂಮಿ ಪೂಜೆ ಡೇಟ್ ಅನೌನ್ಸ್ ಮಾಡುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *