ಪ್ರಧಾನಿ ಮೋದಿಯವರೇ ಧೈರ್ಯವಿದ್ದರೆ ಇಲ್ಲಿ ಸ್ಪರ್ಧಿಸಿ – ಅಸಾದುದ್ದೀನ್ ಓವೈಸಿ!

ಹೈದರಾಬಾದ್: ಎಐಎಂಐಎಂ ಅಧ್ಯಕ್ಷ ಹಾಗೂ ಹಾಲಿ ಹೈದರಾಬಾದ್‍ನ ಸಂಸದರಾದ ಅಸಾದುದ್ದೀನ್ ಓವೈಸಿರವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ನೇರವಾಗಿ ಸವಾಲು ಹಾಕಿದ್ದಾರೆ.

ಹೈದರಾಬಾದನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅಸಾದುದ್ದೀನ್ ಓವೈಸಿ ಮಾತನಾಡಿ, ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರ ಸವಾಲು ಹಾಕಿದ್ದಾರೆ. ನಿಮಗೆ ಧೈರ್ಯವಿದ್ದರೆ ನನ್ನ ವಿರುದ್ಧ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಿ ಎಂದು ಸವಾಲು ಎಸೆದಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಲ್ಲಿ ಬಂದು ಸ್ಪರ್ಧಿಸಲಿ ಎಂದು ತಿಳಿಸಿದ ಅವರು ಕಾಂಗ್ರೆಸ್ ಮುಖಂಡರಿಗೂ ಇದೇ ಸವಾಲನ್ನು ಹಾಕಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಮೋದಿಯವರನ್ನು ಪ್ರಖ್ಯಾತ ಜಾದೂಗಾರರಾದ ಪಿ.ಸಿ.ಸೋರ್ಕರ್ ಹೋಲಿಸಿ, ಮೋದಿಯವರು ಕೇವಲ ಜನರಿಗೆ ಮೋಡಿ ಮಾಡುತ್ತಾರೆ. ಒಂದು ವೇಳೆ ಇವರು ಟಿವಿ ಕಾರ್ಯಕ್ರಮಗಳಲ್ಲಿ ಜಾದೂ ಪ್ರದರ್ಶನ ಮಾಡಿದ್ರೆ, ಟಿವಿ ಸಂಸ್ಥೆಗಳಿಗೆ ಒಳ್ಳೆಯ ಟಿಆರ್‍ಪಿ ಬರುತ್ತದೆ ಎಂದು ಕಿಚಾಯಿಸಿದ್ದಾರೆ.

ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ದೇಶದಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ನಿರುದ್ಯೋಗ ತಾಂಡವವಾಡುತ್ತಿದೆ. ಇದರ ವಿರುದ್ಧ ಮೋದಿ ಸರ್ಕಾರ ಏನು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *