ಕಾಂಗ್ರೆಸ್ ನಾಯಕರಿಗೆ ವೇಣುಗೋಪಾಲ್ ಫುಲ್ ಕ್ಲಾಸ್

ಬೆಂಗಳೂರು: 2018ರ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮೂರು ದಿನಗಳ ಕಾಲ ಸರಣಿ ಸಭೆಯನ್ನು ಆರಂಭಿಸಿರುವ ವೇಣುಗೋಪಾಲ್ ಇಂದು ಕೆಪಿಸಿಸಿ ಮುಂಚೂಣಿ ಘಟಕಗಳ ಸಭೆ ನಡೆಸಿ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೊದಲಿಗೆ ಯೂತ್ ಕಾಂಗ್ರೆಸ್ ಮುಖಂಡರ ಜೊತೆ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಸಭೆ ನಡೆಸಿದರು. ಈ ವೇಳೆ ಯೂತ್ ಮುಖಂಡರಿಗೆ ವೇಣುಗೋಪಾಲ್ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ಕಳೆದ ಭಾರಿ ಎಚ್ಚರಿಕೆ ನೀಡಿದರು ಪ್ರತಿಪಕ್ಷಗಳ ವಿರುದ್ಧ ಎಷ್ಟು ಪ್ರತಿಭಟನೆ ಹೋರಾಟ ನಡೆಸಿದ್ದೀರಿ? ಸಾಂಕೇತಿಕವಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೆ ಸಾಲದು, ರಾಜ್ಯಾದ್ಯಂತ ಹೋರಾಟ ಮಾಡಬೇಕು ಎಂದು ಹೇಳಿ ತರಾಟೆ ತೆಗೆದುಕೊಂಡಿದ್ದಾರೆ.

ಯೂತ್ ಸಭೆಯ ಬಳಿಕ ಎನ್‍ಎಸ್‍ಯುಐ, ರೈತ, ಮಹಿಳಾ ಘಟಕದ ಪದಾಧಿಕಾರಿಗಳ ಸಭೆ ನಡೆಸಿದರು. ಎನ್‍ಎಸ್‍ಯುಐ ಸಭೆಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೈಕಲ್ ಜಾಥಾ ನಡೆಸಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಸೂಚಿಸಿದರು. ಕಾಲೇಜುಗಳಲ್ಲಿ ಸಮಿತಿ ರಚಿಸಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಸಂಘಟನೆಗೆ ಸೇರಿಸಿಕೊಳ್ಳುವಂತೆ ತಿಳಿಸಿದರು. ನಂತರ ಮಹಿಳಾ ಘಟಕದ ಸಭೆಯಲ್ಲಿ ಮುಖಂಡರಿಗೆ ಪ್ರತಿಪಕ್ಷಗಳ ವಿರುದ್ಧ ಹೋರಾಟ ಹಮ್ಮಿಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿ ಭರವಸೆ ನೀಡಿದರು.

ಒಟ್ಟಾರೆ ಚುನಾವಣೆ ದೃಷ್ಟಿಯಿಂದ ಭರ್ಜರಿ ವರ್ಕ್ ಔಟ್ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಮೂರು ದಿನಗಳ ಕಾಲ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಪಕ್ಷ ಬಲವರ್ಧನೆ ಹಾಗೂ ಸಂಘಟನೆ ಮಾಡುವುದು, ಸರ್ಕಾರದ ಸಾಧನೆ ಜನರಿಗೆ ತಿಳಿಸುವ ಮೂಲಕ ಮುಂದಿನ ಎಲೆಕ್ಷನ್ ನಲ್ಲಿ ಭರ್ಜರಿ ಸೀಟು ಗಳಿಸಿ ಅಧಿಕಾರ ಹಿಡಿಯುವ ಕಾರ್ಯತಂತ್ರ ನಡೆಸಿದ್ದಾರೆ.

 

Comments

Leave a Reply

Your email address will not be published. Required fields are marked *